ಬೆಂಗಳೂರು: ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರು ಮೂರು ದಿನಗಳ ಹಿಂದೆಯಷ್ಟೇ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿಕೊಂಡಿದ್ದರು.
ತೇಜಸ್ವಿನಿ ಅನಂತ್ ಕುಮಾರ್ ಅವರು ಮೂರು ದಿನಗಳ ಹಿಂದೆ ಶಾಸಕ ರವಿಸುಬ್ರಮಣ್ಯ ಮನೆಗೆ ತೆರಳಿದ್ದರು. ಇದೇ ವೇಳೆ ರವಿಸುಬ್ರಮಣ್ಯ ಅಣ್ಣನ ಮಗ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಜೊತೆಯೂ ಮಾತುಕತೆ ನಡೆಸಿದ್ದರು.
ಇದೇ ಸಂದಂರ್ಭದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣದ ಸದಸ್ಯರಾಗಿರುವ ತೇಜಸ್ವಿ ಸೂರ್ಯ ಅವರ ಬಳಿಕ ನಮ್ಮ ಪ್ರಚಾರ ಹೆಚ್ಚು ಮಾಡಪ್ಪ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ತೇಜಸ್ವಿನಿಗೆ ಟಿಕೆಟ್ ನೀಡದೇ ತೇಜಸ್ವಿ ಸೂರ್ಯ ಅವರಿಗೆ ನೀಡಿದೆ.
ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಮತ್ತು ತೇಜಸ್ವಿ ಸೂರ್ಯ ಮಧ್ಯೆ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆಯ ಮಧ್ಯೆ ಬಿಜೆಪಿ ಹೈಕಮಾಂಡ್ ರವಿಸುಬ್ರಹ್ಮಣ್ಯ ಅವರಿಗೆ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ರವಿ ಸುಬ್ರಹ್ಮಣ್ಯ ಟಿಕೆಟ್ ಆಫರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಅಣ್ಣನ ಮಗನಾದ ತೇಜಸ್ವಿ ಸೂರ್ಯ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಈ ಕ್ಷೇತ್ರವನ್ನು ಅವರ ಪತ್ನಿ ತೇಜಸ್ವಿನಿ ಅವರಿಗೆ ನೀಡಲು ಪಕ್ಷದ ಮುಖಂಡರು ಮುಂದಾಗಿದ್ದರು. ಈ ಸಂಬಂಧ ದಕ್ಷಿಣ ಭಾಗದ ಬಿಜೆಪಿ ಶಾಸಕರು, ಮುಖಂಡರ ಸಭೆ ನಡೆಸಿದ ಬಳಿಕ ರಾಜ್ಯ ನಾಯಕರು ಹೈಕಮಾಂಡಿಗೆ ತೇಜಸ್ವಿನಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.