ಚಿಕ್ಕಬಳ್ಳಾಪುರ: ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ರದ್ದು ಮಾಡಬೇಕಾ ಅಥವಾ ಬೇಡವೇ ಎಂಬ ವಿಚಾರವಾಗಿ ರಾಜಕಾರಣಿಗಳು ಹಾಗೂ ತಜ್ಞರ ಅಭಿಪ್ರಾಯದಲ್ಲಿ ವ್ಯತ್ಯಾಸ ಇರುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜಕಾರಣಿಗಳು ಹಾಗೂ ತಜ್ಞರ ಹೇಳಿಕೆಗೆ ವ್ಯತ್ಯಾಸ ಇರುತ್ತದೆ. ಸರ್ಕಾರ ಎಲ್ಲಾ ದೃಷ್ಟಿಕೋನದಿಂದಲೂ ನೋಡಿ ಜವಾಬ್ದಾರಿಯಿಂದ ನಿರ್ಧಾರ ತೆಗೆದುಕೊಳ್ಳಲಿದೆ. ಕರ್ಫ್ಯೂ ಸಂಬಂಧ ಸಿಎಂ ನಾಳಿನ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ವಾರ ವೀಕೆಂಡ್ ಕರ್ಫ್ಯೂ ಡೌಟ್ – ಸರ್ಕಾರದ ಮುಂದಿರುವ ಆಯ್ಕೆಗಳೇನು?
ಕೊರೊನಾ ಮೂರನೇ ಅಲೆ ಬಹಳ ವೇಗವಾಗಿ ಹರಡುತ್ತದೆ. ಬಹುಶಃ ಮುಂದಿನ 20 ದಿನ ಅಥವಾ 4 ವಾರ ಹೀಗೆಯೇ ಮುಂದುವರಿಯಲಿದೆ. ತಜ್ಞರ ಅಭಿಪ್ರಾಯ ಕೂಡ ಇದೇ ಆಗಿದೆ. ಪ್ರತಿ ದಿನ 60,000ದಿಂದ 1.20 ಲಕ್ಷ ಪ್ರಕರಣ ವರದಿಯಾಗುವ ಸಾಧ್ಯತೆ ಇದೆ. ಹಾಗೆಯೇ ಬಹಳ ಬೇಗನೆ ಕಡಿಮೆಯೂ ಆಗಲಿದೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗಳಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲುತ್ತಿದೆ. ಈ ಬಗ್ಗೆಯೂ ಹೆಚ್ಚು ಗಮನ ಹರಿಸಿದ್ದೇವೆ. ಜನರು ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು. ಲಸಿಕೆ ಹಾಕಿಸಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ಎರಡನ್ನೂ ಪಾಲನೆ ಮಾಡಿದರೆ ಸೋಂಕು ನಿಯಂತ್ರಣ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಅಧಿಕೃತ – ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭ