ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ (K J George) ಅವರ ಕಚೇರಿಯಲ್ಲಿ ಕಳ್ಳತನವಾಗಿರುವ ಘಟನೆ ನಗರದ ಕಚೇರಿಯಲ್ಲಿ ನಡೆದಿದೆ.
ಕೆ.ಜೆ ಜಾರ್ಜ್ ಅವರ ಖಾಸಗಿ ಆಪ್ತ ಸಹಾಯಕ ಮೋಗಣ್ಣ ಅವರ ಬಳಿ ಇದ್ದ ಫೈಲ್ಗಳು, 15 ಸಾವಿರ ಹಣ ಹಾಗೂ ಅವರ ಖಾಸಗಿ ದಾಖಲೆಗಳು ಕಳ್ಳತನವಾಗಿವೆ. ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ನಗರದ ಪ್ರವಾಸಿ ಮಂದಿರದಲ್ಲೇ ಒಂದು ಕೊಠಡಿಯನ್ನು ಕಚೇರಿ ಮಾಡಿಕೊಂಡಿದ್ದಾರೆ.
ಸರ್ಕಾರದಿಂದ ಕೊಟ್ಟಿರುವ ಆಪ್ತ ಸಹಾಯಕರ ಜೊತೆ ಸಚಿವ ಜಾರ್ಜ್ ಅವರು ಇಟ್ಟುಕೊಂಡಿರುವ ಇಬ್ಬರು ಆಪ್ತ ಸಹಾಯಕರು ಅದೇ ಕಚೇರಿಯಲ್ಲಿ ಇದ್ದಾರೆ. ಎರಡು ದಿನದ ಹಿಂದೆ ಕಚೇರಿಯಲ್ಲಿ ಬ್ಯಾಗ್ ಇಟ್ಟು ಹೊರಗಡೆ ಹೋಗಿ ಬರುವಷ್ಟರಲ್ಲಿ ಬ್ಯಾಗ್ ನಾಪತ್ತೆಯಾಗಿದೆ. ಪ್ರವಾಸಿ ಮಂದಿರದಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದ ಕಾರಣ ಕದ್ದವರು ಯಾರೆಂದು ಕೂಡ ಸ್ಪಷ್ಟವಿಲ್ಲದಂತಾಗಿದೆ. ಇದನ್ನೂ ಓದಿ: ಸಿಂಗಾಪುರಕ್ಕೆ ಕುಟುಂಬ ಸದಸ್ಯರೊಂದಿಗೆ ತೆರಳಿದ ಹೆಚ್ಡಿಕೆ
ದಾಖಲೆ ಹಾಗೂ ಹಣ ಕಳುವಾದ ಹಿನ್ನೆಲೆ ಮೊಗಣ್ಣ ಚಿಕ್ಕಮಗಳೂರು ನಗರದ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಸಿಸಿ ಕ್ಯಾಮೆರಾಗಳು ಇಲ್ಲದ ಕಾರಣ ಪೊಲೀಸರಿಗೂ ತನಿಖೆ ಕಷ್ಟವಾಗಿದೆ. ನಿತ್ಯ ನೂರಾರು ಜನ ಓಡಾಡುವ ಜಾಗ, ಬಂದು ಹೋಗುವ ಜಾಗ. ಯಾರ ಮೇಲೆ ಅನುಮಾನ ಪಡುವುದು, ಯಾರನ್ನ ವಿಚಾರಣೆ ಮಾಡುವುದು ಅನ್ನೋದು ಪೊಲೀಸರಿಗೂ ತಲೆನೋವು ತರಿಸಿದೆ.