ನವದೆಹಲಿ: ದ್ವೇಷಪೂರಿತ ಹೇಳಿಕೆಗಳ ಮೂಲಕ ಕೋಮುಭಾವನೆ ಕೆರಳಿಸಿದ ಆರೋಪದ ಮೇಲೆ AIMIM ನಾಯಕ ಅಸಾದುದ್ದೀನ್ ಓವೈಸಿ ಹಾಗೂ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದರೊಂದಿಗೆ ಯತಿ ನರಸಿಂಹಾನಂದ ಸರಸ್ವತಿ ಹಾಗೂ ಪತ್ರಕರ್ತ ಸಾಬಾ ನಖ್ವಿ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗಿದೆ. ಇವರು ವಿವಿಧ ಗುಂಪುಗಳನ್ನು ಪ್ರಚೋದಿಸಿದ್ದು, ಹಾನಿಕಾರಕ ಸನ್ನಿವೇಶಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ದೇವಾಲಯ ಧ್ವಂಸ – ವಿಗ್ರಹ ವಿರೂಪಗೊಳಿಸಿದ ದುಷ್ಕರ್ಮಿಗಳು
ಓವೈಸಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಧಿ 295A (ಯಾವುದೇ ಧರ್ಮದ ನಂಬಿಕೆಗಳನ್ನು ಅವಮಾನಿಸುವ ದುರುದ್ದೇಶಪೂರಿತ ಕೃತ್ಯಗಳು), 153A (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505(2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಓವೈಸಿ ವಿರುದ್ಧ FIR ದಾಖಲಿಸಿದ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿರುವ AIMIM ಬೆಂಬಲಿಗರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸಿದ ಮೂವರು ಮಹಿಳೆಯರು ಸೇರಿದಂತೆ ಸುಮಾರು 25 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯಾವುದೇ ದೇಶ ನಮಗೆ ಹಣ ನೀಡುತ್ತಿಲ್ಲ, ಆದರೆ ಭಾರತ ನೀಡುತ್ತಿದೆ: ಲಂಕಾ ಪ್ರಧಾನಿ
ಬಂಧನಕ್ಕೆ ಮಮತಾ ಬ್ಯಾನರ್ಜಿ ಒತ್ತಾಯ: ದೇಶದ ಏಕತೆಗೆ ಭಂಗ ಬಾರದಂತೆ ಹಾಗೂ ಜನರು ಮಾನಸಿಕವಾಗಿ ಸಂಕಟಕ್ಕೆ ಒಳಗಾಗದಂತೆ, ಆರೋಪಿಗಳಾಗಿರುವ ಬಿಜೆಪಿ ನಾಯಕರನ್ನು ಕೂಡಲೇ ಬಂಧಿಸಬೇಕೆಂದು ನಾನು ಬಲವಾಗಿ ಕೋರುತ್ತೇನೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.
ಕೆಲವು ವಿನಾಶಕಾರಿ ಬಿಜೆಪಿ ನಾಯಕರ ಇತ್ತೀಚಿನ ಹೇಯ ಮತ್ತು ಕ್ರೂರ ದ್ವೇಷದ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. ಇದರ ಪರಿಣಾಮವಾಗಿ ಹಿಂಸಾಚಾರದ ಹರಡುವಿಕೆ ಮಾತ್ರವಲ್ಲದೆ, ಶಾಂತಿ ಮತ್ತು ಸೌಹಾರ್ದತೆಯ ಭಂಗಕ್ಕೆ ಹಾಗೂ ದೇಶದ ವಿಭಜನೆಗೂ ಕಾರಣವಾಗುತ್ತದೆ. ಆದ್ದರಿಂದ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಬಲವಾಗಿ ಒತ್ತಾಯಿಸುತ್ತೇನೆಂದು ಟ್ವೀಟ್ ಮಾಡಿದ್ದಾರೆ.