ಕೋಲಾರ: ತೆಲಂಗಾಣದಲ್ಲಿ (Telangana) ಕಾಂಗ್ರೆಸ್ (Congress) ಪಕ್ಷಕ್ಕೆ ಬಹುಮತ ಬಂದಿದ್ದರೂ ಅವರ ಒಳಜಗಳದಿಂದ ಬಹಳ ದಿನ ಸರ್ಕಾರ ನಡೆಯೋದಿಲ್ಲ ಎಂದು ಸಂಸದ ಮುನಿಸ್ವಾಮಿ (S.Muniswamy) ಭವಿಷ್ಯ ನುಡಿದಿದ್ದಾರೆ.
ಮೂರು ರಾಜ್ಯಗಳಲ್ಲಿ ಬಿಜೆಪಿ (BJP) ಗೆಲುವು ಸಾಧಿಸಿದ ಹಿನ್ನೆಲೆ ಕೋಲಾರದಲ್ಲಿ ಸಂಭ್ರಮಾಚರಣೆ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಈಗಲೇ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಾರದು ಎಂದು ಕಿತ್ತಾಡುತ್ತಿದ್ದಾರೆ. ಇದೇ ರೀತಿ ಅಲ್ಲಿನ ಕಾಂಗ್ರೆಸ್ನಲ್ಲಿನ ಗುಂಪುಗಾರಿಕೆಯಿಂದ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಚುನಾವಣೆ ವೇಳೆ ಜಮೀರ್ ಅಹ್ಮದ್ ಅವರನ್ನು ಕರೆದುಕೊಂಡು ಬಟ್ಟೆಗಳಿಂದ ಮಂತ್ರಗಳನ್ನು ಹಾಕಿಸಿದ್ದು ನಾನು ನೋಡಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: RSS, ABVP ಕಾರ್ಯಕರ್ತ ರೇವಂತ್ ರೆಡ್ಡಿ ಈಗ ಕಾಂಗ್ರೆಸ್ ಸಿಎಂ ರೇಸ್ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?
ಅವರಲ್ಲಿಯೇ ಸುಮಾರು ಎಪ್ಪತ್ತಾರು ಗುಂಪುಗಳಿವೆ. ಇನ್ನೂ ರಾಜಸ್ಥಾನ ಹಾಗೂ ಛತ್ತೀಸ್ಗಢ ಕಾಂಗ್ರೆಸ್ನಲ್ಲೂ ಎ,ಬಿ,ಸಿ ಟೀಂಗಳು ಇವೆ. ಅವರ ಪಕ್ಷ ಎಷ್ಟೇ ಗ್ಯಾರಂಟಿ ಕೊಟ್ಟರು, ಅದೆಲ್ಲವನ್ನ ಬಿಟ್ಟು ದೇಶಕ್ಕೆ ಮೋದಿ ಒಬ್ಬರೇ ಗ್ಯಾರಂಟಿ ಎಂದು ಜನ ಬಿಜೆಪಿ ಬೆಂಬಲಿಸಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ ಸಿಕ್ಕ ಹಿನ್ನೆಲೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಪಕ್ಷದ ಮುಖಂಡರು ಸಿಹಿ ಹಂಚಿದರು. ಈ ವೇಳೆ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಪರ ಕಾರ್ಯಕರ್ತರು ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ