– ನಾಳಿನ ಪ್ರಮಾಣವಚನ ಕಾರ್ಯಕ್ರಮ ಅನುಮಾನ
– ವಿಜಯ್ ಮೌಖಿಕ ಮಾಹಿತಿ ಒಪ್ಪದ ರಾಜ್ಯಪಾಲರು
ಚೆನ್ನೈ: ಬಹುಮತದ ಕೊರತೆಯಿಂದ ತಮಿಳುನಾಡಲ್ಲಿ (Tamil Nadu) ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿರುವ ಟಿವಿಕೆ ಮುಖ್ಯಸ್ಥ ವಿಜಯ್ಗೆ (Vijay) ಶಾಕ್ ಎದುರಾಗಿದೆ. ವಿಜಯ್ ಮೌಖಿಕ ಮಾಹಿತಿಗೆ ರಾಜ್ಯಪಾಲರು ತೃಪ್ತರಾಗದ ಕಾರಣ, ನಾಳೆ ಪ್ರಮಾಣವಚನ ಸ್ವೀಕರಿಸುವುದು ಅನುಮಾನವಾಗಿದೆ.
ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಅವರನ್ನು ಟಿವಿಕೆ ಮುಖ್ಯಸ್ಥ ವಿಜಯ್ ಇಂದು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ವೇಳೆ ವಿಜಯ್ ನೀಡಿದ ಮೌಖಿಕ ಮಾಹಿತಿಗೆ ತೃಪ್ತರಾಗಿಲ್ಲ. ಬಹುಮತ ಸಾಬೀತುಪಡಿಸುವಲ್ಲಿ ವಿಜಯ್ ವಿಫಲರಾದರು. ಇದನ್ನೂ ಓದಿ: 2024ರಲ್ಲೇ ಮುಂದಿನ ಸಿಎಂ ಆಗುವ ಬಗ್ಗೆ ಸುಳಿವು ನೀಡಿದ್ದ ವಿಜಯ್
ಕಾಂಗ್ರೆಸ್ ಶಾಸಕರ ಬೆಂಬಲ ಪತ್ರವನ್ನೂ ನೀಡದೆ ವಿಜಯ್ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಸರ್ಕಾರ ರಚನೆ ಹಕ್ಕು ಮಂಡನೆಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ, ನಾಳೆ ಪ್ರಮಾಣವಚನ ಸ್ವೀಕರಿಸುವುದು ಅನುಮಾನವಾಗಿದೆ. ಒಂದೆರೆಡು ದಿನಗಳಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಕಾಲಾವಕಾಶ ನೀಡಿದ್ದಾರೆ.
108 ಸ್ಥಾನಗಳನ್ನು ಗೆದ್ದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ 118 ಸ್ಥಾನಗಳ ಬಹುಮತವನ್ನು ಸಾಧಿಸಲು ಕನಿಷ್ಠ 10 ಸ್ಥಾನಗಳು ಬೇಕಾಗಿವೆ. ಕಾಂಗ್ರೆಸ್ನ ಐದು ಸ್ಥಾನಗಳೊಂದಿಗೆ, ವಿಜಯ್ ಗೆದ್ದ ಎರಡು ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ, ಈ ಸಂಖ್ಯೆ 112 ಕ್ಕೆ ಏರಿದೆ. ಆದರೆ, ಬಹುಮತ ಸಾಬೀತಿಗೆ ಟಿವಿಕೆಗೆ ಆರು ಸ್ಥಾನಗಳ ಅಗತ್ಯವಿದೆ. ಇದನ್ನೂ ಓದಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ರಾಜೀನಾಮೆ
ಕಾಂಗ್ರೆಸ್ ಹೊರತುಪಡಿಸಿ, ಪಕ್ಷೇತರರು ಸೇರಿದಂತೆ ಯಾರು ವಿಜಯ್ ತಂಡದ ಭಾಗವಾಗಲಿದ್ದಾರೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಎರಡು ಸ್ಥಾನಗಳನ್ನು ಗೆದ್ದಿರುವ ವಿಸಿಕೆ ಏನು ಮಾಡಬೇಕೆಂಬುದರ ಕುರಿತು ಆಂತರಿಕ ಚರ್ಚೆ ನಡೆಸುತ್ತಿದೆ. ಡಿಎಂಕೆ 59, ಎಐಎಡಿಎಂಕೆ 47, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2, ಸಿಪಿಐ (ಎಂ) 2, ಮತ್ತು ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನವನ್ನು ಗೆದ್ದಿವೆ.

