– ನನ್ನ ವಿರುದ್ಧ ಗಾಸಿಪ್ ಹರಿದಾಡುತ್ತಿವೆ
– ಜೆಡಿಎಸ್ನವರು ನನಗೆ ಮತ ಹಾಕಿದ್ದಾರೆ
ಮಂಡ್ಯ: ಮಂಗಳವಾರ ಬಿಜೆಪಿ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಯ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಸಂಸದೆ ಸುಮಲತಾ ಅವರು ಇಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಹಾಜರಾಗಿ ಡ್ಯಾಮೇಜ್ ಕಂಟ್ರೋಲ್ ಮಾಡಿದ್ದಾರೆ.
ಇಂದು ನಾಗಮಂಗಲ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಬಿಜೆಪಿ ಆಫೀಸ್ನಿಂದ ಆಹ್ವಾನ ಬಂದಿತ್ತು. ಥ್ಯಾಂಕ್ಸ್ ಹೇಳಬೇಕಾಗಿದ್ದರಿಂದ ನಾನು ಹೋಗಿದ್ದೆ. ಇವತ್ತು ಕಾಂಗ್ರೆಸ್ ಮುಖಂಡರು ಕರೆದಿದ್ದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ನಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಥ್ಯಾಂಕ್ಸ್ ಹೇಳಿದ್ದೇನೆ. ನಾನು ಪಕ್ಷೇತರ ಸಂಸದೆಯಾಗಿದ್ದು ನಾನು ಎಲ್ಲಿಗೆ ಹೋಗಬೇಕು ಅನ್ನೋದು ಗೊತ್ತು ಎಂದು ಹೇಳಿದರು.
ನನ್ನಲ್ಲಿ ಹಾಗೂ ನನ್ನ ಉದ್ದೇಶದಲ್ಲಿ ಯಾವುದೇ ದುರುದ್ದೇಶವಿಲ್ಲ. ಪ್ರತಿಯೊಬ್ಬರ ಅಭಿಪ್ರಾಯಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಹೀಗಾಗಿ ನನ್ನ ವಿರುದ್ಧ ಗಾಸಿಪ್ ಗಳು ಹರಿದಾಡುತ್ತಿವೆ. ಪಕ್ಷದ ವಿರುದ್ಧ ನಿಂತು ನನ್ನ ಪರ ಕೆಲಸ ಮಾಡಿದವರಿಗೆ ನಾನು ವೇದಿಕೆಯ ಮೇಲೆ ಕರೆದು ಥ್ಯಾಂಕ್ಸ್ ಹೇಳಿದ್ದೇನೆ. ಅಂಬರೀಶ್ ಅವರನ್ನು ಪ್ರೀತಿಸುತ್ತಿದ್ದವರು, ಸ್ವಾಭಿಮಾನ ಇದ್ದವರು ನನಗೆ ಮತ ಹಾಕಿದ್ದಾರೆ. ಜೆಡಿಎಸ್ ಮತದಾರರು ನನಗೆ ಮತ ಹಾಕಿದ್ದಾರೆ. ಜೆಡಿಎಸ್ ಆಫೀಸ್ಗೆ ನನ್ನನ್ನು ಕರೆದರೂ ನಾನು ಹೋಗುತ್ತೇನೆ. ಅವರಿಗೂ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದರು. ಇದನ್ನು ಓದಿ: ಮಂಡ್ಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ಭಾಗಿ
ಪಕ್ಷೇತರ ಎಂಪಿ ಆಗಿರಬೇಕು ಎನ್ನುವುದನ್ನು ಜನರೇ ನಿರ್ಧಾರ ಮಾಡಿದ್ದಾರೆ. ಅಮಿತ್ ಶಾ ಭೇಟಿ ಮಾಡಿದಾಗ ಅವರು ನಮ್ಮ ಸಹಕಾರವಿದೆ ಎಂದು ಹೇಳಿದ್ದಾರೆ. ಅವರು ಕೂಡ ನನ್ನಿಂದ ಯಾವುದೇ ನಿರೀಕ್ಷೆ ಇಟ್ಟಿಲ್ಲ. ಚುನಾವಣೆಯಲ್ಲಿ ನನಗೆ ಸಹಾಯ ಮಾಡಿದ್ದು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು. ಇದಕ್ಕಾಗಿ ನಾನು ಕಾಂಗ್ರೆಸ್ಗೆ ಋಣಿಯಾಗಿರುತ್ತೇನೆ. ನಾನು ಯಾವುದೇ ಪಕ್ಷ ಸೇರಿದರೂ ಕಾಂಗ್ರೆಸ್ ಕಾರ್ಯಕರ್ತರನ್ನು ಮರೆಯಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ಯಾರು ಹೈಕಮಾಂಡ್ ಇಲ್ಲ. ನನಗೆ ಜನರೇ ಹೈಕಮಾಂಡ್. ನಾನು ಉಪಚುನಾವಣೆಯಲ್ಲಿ ತಟಸ್ಥವಾಗಿ ಇರಬಹುದು. ಕೆಲವರು ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕೆ ನನ್ನ ಹೆಸರು ಬಳಸುತ್ತಿದ್ದಾರೆ ಎಂದು ಅಸಮಾಧಾನವನ್ನು ಹೊರ ಹಾಕಿದರು.