ಚಿಕ್ಕೋಡಿ(ಬೆಳಗಾವಿ): ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಅದರಂತೆ ಸತತ ಪರಿಶ್ರಮದಿಂದ ನಮ್ಮ ಗುರಿಯನ್ನು ತಲುಪಬಹುದು ಎನ್ನುವುದನ್ನ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕನ ಮಗ ಇಂದು ಐಪಿಎಸ್ ಅಧಿಕಾರಿ ಆಗುವ ಮೂಲಕ ತೋರಿಸಿಕೊಟ್ಟಿದ್ದಾನೆ.
ಸಕ್ಕರೆ ಕಾರ್ಖಾನೆಯ ಚಾಲಕನ ಮಗ ಅವರ ತಂದೆ ತಾಯಿಯ ಗೌರವ ಹೆಚ್ಚಿಸುವ ಜೊತೆಗೆ ಇಂದು ಗ್ರಾಮವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ. ಜಗದೀಶ್ ಅಡಹಳ್ಳಿ ಕೇವಲ 29 ವರ್ಷದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ್ ಪಡೆದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಂಟಪಕ್ಕೆ ಬರುತ್ತಿದ್ದ ವರನನ್ನು ನೋಡಿ ಕುಣಿದು ಕುಪ್ಪಳಿಸಿದ ವಧು
ಯಾರಿದು?
ಜಗದೀಶ್ ಅವರು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಜನಿಸಿದ್ದು, ಅಡಹಳ್ಳಿ ಮಧ್ಯಮ ವರ್ಗದ ಶ್ರೀಕಾಂತ್ ಹಾಗೂ ಸುಮಿತ್ರಾ ಅಡಹಳ್ಳಿ ದಂಪತಿಯ ನಾಲ್ವರು ಮಕ್ಕಳಲ್ಲಿ ಜಗದೀಶ್ ಕಿರಿಯ ಪುತ್ರ. 29 ವರ್ಷದಲ್ಲಿ ದೊಡ್ಡ ಹುದ್ದೆ ಪಡೆಯುವ ಮೂಲಕ ಗ್ರಾಮ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪದವಿ ಮುಗಿಸಿ 2014ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು. ಯುಪಿಎಸ್ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ್ ಪಡೆದಿದ್ದಾರೆ. ಬಡವನಾಗಿ ಹುಟ್ಟಿದ ಜಗದೀಶ್ ಅವರ ತಂದೆ ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮಗನ ಸಾಧನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೋಷಕರು, ನನ್ನ ಮಗ ಯುಪಿಎಸ್ಸಿ ಪಾಸಾಗಿ ಐಪಿಎಸ್ ಅಧಿಕಾರಿಯಾಗಿದ್ದಾನೆ. ನನಗೆ ತುಂಬಾ ಖುಷಿಯಾಗಿದೆ. ನಾನು ಒಬ್ಬ ಸಾಧಾರಣ ಚಾಲಕ ಈಗ ನನ್ನ ಮಗ ಯುಪಿಎಸ್ಸಿ ಪಾಸಾಗಿದ್ದಾನೆ. ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಂತೋಷದ ವಿಷಯ. ಈಗ ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದು, ನಮಗೆ ಹೆಮ್ಮೆಯ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ
ಇಂದು ನನ್ನ ಮಗನ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಇಂದು ನಮ್ಮ ಅಡಹಳ್ಳಿ ಮನೆತನದ ಗೌರವ ಹೆಚ್ಚಿಸಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಇಂದಿನ ಅಧುನಿಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನುವ ಛಲವಿದ್ದರೆ ಸತತ ಓದು ಮತ್ತು ಪರಿಶ್ರಮ ನಮ್ಮ ಕನಸುಗಳನ್ನು ನನಸು ಮಾಡುವುದರಲ್ಲಿ ಎರಡು ಮಾತಿಲ್ಲ ಎನ್ನುವುದಕ್ಕೆ ಜಗದೀಶ್ ಅಡಹಳ್ಳಿ ಮಾದರಿಯಾಗಿದ್ದಾರೆ. ಐಪಿಎಸ್ ಕನಸು ಕಾಣುತ್ತಿರುವ ಬಡ ಮಕ್ಕಳಿಗೆ ಇಂದು ಚಾಲಕನ ಮಗ ಮಾದರಿಯಾಗಿದ್ದು, ಬಡ ಮಕ್ಕಳು ಉತ್ತಮ ಹುದ್ದೆಗಳನ್ನು ಅಲಂಕರಿಸಿ ತಮ್ಮ ಉದಾತ್ತ ಕೊಡುಗೆಯನ್ನು ಸಮಾಜಕ್ಕೆ ನೀಡುವಂತಾಗಲಿ ಎನ್ನುವುದು ನಮ್ಮ ಆಶಯ.