ಭುವನೇಶ್ವರ್: ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸೇರಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ ಹಾಡಿಗೆ ನೃತ್ಯ ಮಾಡಿದ ಹಿನ್ನೆಲೆ ಮುಖ್ಯೋಪಾಧ್ಯಾಯಿನಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಒಡಿಶಾದ ಗಂಜಾಂ ಜಿಲ್ಲೆಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತಾ ಪಾಡಿ, ತೆಲುಗಿನ ಬ್ಲಾಕ್ಬಸ್ಟರ್ ಪುಷ್ಪ ಚಿತ್ರದ ಹಾಡಿಗೆ ತರಗತಿಯಲ್ಲಿ ಕೆಲವು ವಿದ್ಯಾರ್ಥಿಗಳೊಂದಿಗೆ ಸೇರಿ ನೃತ್ಯ ಮಾಡಿದ್ದಾರೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರದಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಲ್ಪೆ ಕಡಲಲ್ಲಿ ಕರಿ ಸುಳಿಗಾಳಿ – ಆಗಸಕ್ಕೆ ಚಿಮ್ಮಿದ ಸಮುದ್ರದ ನೀರು
ಶೇರಗಡ ಬ್ಲಾಕ್ನಲ್ಲಿರುವ ಬಾರಾಮುಂಡಲಿ ಪ್ರೌಢಶಾಲೆಯ ಸ್ಮಾರ್ಟ್ ತರಗತಿಯಲ್ಲಿ ಹಲವಾರು 10 ನೇ ತರಗತಿ ವಿದ್ಯಾರ್ಥಿಗಳು ಒಟ್ಟುಗೂಡಿದ್ದರು. ಕೊಠಡಿಯಲ್ಲಿದ್ದ ಕೆಲವು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್ಗಳೊಂದಿಗೆ ಟಿವಿಯನ್ನು ಲಿಂಕ್ ಮಾಡಿರಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
14 ಮತ್ತು 24 ಸೆಕೆಂಡುಗಳ ಅವಧಿಯ ಎರಡು ನೃತ್ಯದ ವೀಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅವರು ಅಲ್ಲು ಅರ್ಜುನ್ ಅಭಿನಯದ ಜನಪ್ರಿಯ ಗೀತೆಯಾದ ‘ಶ್ರೀವಲ್ಲಿ’ ಟ್ಯೂನ್ಗಳಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಇದನ್ನೂ ಓದಿ: ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ ಅನ್ನೋದಕ್ಕೆ ಛೋಟಾ ಪಾಕಿಸ್ತಾನ ಘೋಷಣೆಯೇ ಸಾಕ್ಷಿ: ಮುತಾಲಿಕ್
ಶಾಲಾ ಪರಿವರ್ತನೆ ಯೋಜನೆಯಡಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ತರಗತಿಯಲ್ಲಿ ಅಳವಡಿಸಿದ್ದ ಎಲ್ಇಡಿ ಟಿವಿಯಲ್ಲಿ ಆ ಹಾಡನ್ನು ಹಾಕಿದ್ದರು ಎಂದು ತಿಳಿದು ಬಂದಿದೆ. ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಅವರನ್ನು ಬುಧವಾರದಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಬಿನಿತಾ ಸೇನಾಪತಿ ತಿಳಿಸಿದ್ದಾರೆ.
ಈ ಕುರಿತು ವಿಚಾರಣೆ ನಡೆಯುತ್ತಿದ್ದು, ಕರ್ತವ್ಯ ಲೋಪವೆಸಗಿರುವ ಇನ್ನೂ ಕೆಲವು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.