ಚಿತ್ರದುರ್ಗ: ಶಾಲಾ ಕೊಠಡಿಯಲ್ಲಿ ಬಾಲಕಿ ಕೈ ಮೇಲೆ ಬೆಂಚ್ ಬಿದ್ದು ಕೈ ಬೆರಳುಗಳು ಅರ್ಧಕ್ಕೆ ಕಟ್ ಆಗರೋ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದಿದೆ.
ಸರ್ಕಾರಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಸರದಿಯಂತೆ ನಿತ್ಯವೂ ಇಬ್ಬರು ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಕೊಠಡಿಗಳ ಕಸ ಗುಡಿಸುತ್ತಿದ್ದರು. ಹೀಗಾಗಿ 7 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೋರ್ವಳು ಶಾಲಾ ಕೊಠಡಿಯ ಕಸಗುಡಿಸುವ ವೇಳೆ ಬೆಂಚ್ ಎತ್ತಿಡುವಾಗ ತನ್ನ ಕೈ ಮೇಲೆ ಹಾಕಿಕೊಂಡಿದ್ದಾಳೆ. ಪರಿಣಾಮ ಆಕೆಯ ಬಲಗೈನ ಮೂರು ಬೆರಳುಗಳು ಅರ್ಧಕ್ಕೆ ತುಂಡಾಗಿದ್ದು, ತೀವ್ರ ರಕ್ತಸ್ರಾವವಾಗಿ ಆಕೆ ಮೂರ್ಛೆ ಹೋಗಿದ್ದಳು. ತಕ್ಷಣ ಆಕೆಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆಯಿಂದಾಗಿ ಗ್ರಾಮಸ್ಥರು ಹಾಗೂ ಪೋಷಕರು, ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶಕ್ಕೊಳಗಾಗಿದ್ದು, ಈ ಘಟನೆ ಶಿಕ್ಷಕರ ನಿರ್ಲಕ್ಷ್ಯದಿಂದಾಗಿದೆ ಎಂದು ಆರೋಪಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಬಾಲಕಿಯ ಜೀವಕ್ಕೆ ಯಾವುದೇ ತೊಂದರೆಯಾಗಿಲ್ಲ. ಹೀಗಾಗಿ ಅಗತ್ಯ ಚಿಕಿತ್ಸೆ ನೀಡಿರೋ ಜಿಲ್ಲಾಸ್ಪತ್ರೆ ವೈದ್ಯರು ಆಕೆಯ ಬೆರಳುಗಳನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸಬಹುದೆಂಬ ಭರವಸೆಯನ್ನ ನೀಡಿದ್ದಾರೆ.
ಘಟನೆ ಸಂಬಂಧ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.