– ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ
– ಮೂವರ ಮೃತದೇಹ ಮಧ್ಯಾಹ್ನ ಶಿಫ್ಟ್
ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 8 ಮಂದಿ ಕನ್ನಡಿಗರು ದಾರುಣವಾಗಿ ಮೃತಪಟ್ಟಿದ್ದಾರೆ. ಇದೀಗ ಅದರಲ್ಲಿ ಒಟ್ಟು ಐವರ ಮೃತದೇಹ ಬೆಂಗಳೂರಿಗೆ ರವಾನೆಯಾಗಿದೆ.
ಯುಎಲ್-173 ಶ್ರೀಲಂಕಾ ಏರ್ ಲೈನ್ಸ್ ವಿಮಾನದಲ್ಲಿ ನಾಲ್ವರ ಮೃತದೇಹ ಶಿಫ್ಟ್ ಮಾಡಲಾಗಿದ್ದು, ತಡರಾತ್ರಿ 2.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನವಾಗಿದೆ. ಇದೇ ವೇಳೆ ನೆಲಮಂಗಲ ಶಾಸಕ ಶ್ರೀನಿವಾಸ್, ಇ.ಕೃಷ್ಣಪ್ಪ ಬೆಂಗಳೂರಿಗೆ ಆಗಮಿಸಿ ಅಂತಿಮ ದರ್ಶನ ಪಡೆದರು.
ನೆಲಮಂಗಲ, ಕಾಚನಹಳ್ಳಿ ಜೆಡಿಎಸ್ ಮುಖಂಡ ಹನುಮಂತರಾಯಪ್ಪ, ಲಕ್ಷ್ಮೀ ನಾರಾಯಣ, ಶಿವಕುಮಾರ್, ದಾಸರಹಳ್ಳಿಯ ರಂಗಪ್ಪ ಈ ನಾಲ್ವರ ಮೃತದೇಹಗಳು ಶ್ರೀಲಂಕಾದಿಂದ ರವಾನೆಯಾಗಿದೆ. ರಂಗಪ್ಪ ಮೃತದೇಹ ದಾಸರಹಳ್ಳಿಯ ಚೊಕ್ಕಸಂದ್ರದ ನಿವಾಸಕ್ಕೆ ರವಾನೆಯಾಗಿದೆ. ಉಳಿದ ಮೂವರ ಮೃತದೇಹಗಳನ್ನು ನೆಲಮಂಗಲದ ಅವರವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ಶಿವಕುಮಾರ್ ಮೃತದೇಹಗಳನ್ನು ನೆಲಮಂಗಲದ ಜ್ಯೂನಿಯರ್ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಇಡುವ ಸಾಧ್ಯತೆ ಇದೆ.
ಬಿಟಿಎಂ ಲೇಔಟ್ನ ನಾಗರಾಜ್ ರೆಡ್ಡಿ ಮೃತದೇಹ ಕೂಡ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ರವಾನೆಯಾಗಿದೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ 11.30ಕ್ಕೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯ್ತು. ನಾಗರಾಜ್ ರೆಡ್ಡಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 11 ಗಂಟೆ ಬಳಿಕ ಅಂತ್ಯ ಸಂಸ್ಕಾರ ನೆರವೇರಲಿದೆ. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹಗಳು ಬರುತ್ತಿದ್ದಂತೆಯೇ ಗೃಹಸಚಿವ ಎಂ.ಬಿ ಪಾಟೀಲ್ ದರ್ಶನ ಪಡೆದ್ರು. ಪುಷ್ಪಗುಚ್ಛ ಇಟ್ಟು ಅಂತಿಮ ನಮನ ಸಲ್ಲಿಸಿದ್ರು. ಬಳಿಕ ಮಾತನಾಡಿ, ಘಟನೆಯಿಂದ ತುಂಬಾ ನೋವಾಗಿದೆ. ಇಂತಹ ಕೃತ್ಯಗಳು ನಡೆಯಬಾರದಿತ್ತು. ಆದ್ರೂ ನಡೆದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ರು.
ನೆಲಮಂಗಲ ಶಾಸಕ ಶ್ರೀನಿವಾಸ್ ಮಾತನಾಡಿ, ಘಟನೆಯಲ್ಲಿ ಮೃತಪಟ್ಟವರೆಲ್ಲರೂ ನಮ್ಮ ಆಪ್ತರೇ ಆಗಿದ್ದು, ತೀರಾ ನೋವಾಗಿದೆ ಅಂದ್ರು. ಇದೇ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಇ.ಕೃಷ್ಣಪ್ಪ, ಏಳೂ ಮೃತದೇಹಗಳ ರವಾನೆಗೆ ಎಲ್ಲಾ ಪ್ರಕ್ರಿಯೆ ಮುಕ್ತಾಯವಾಗಿದೆ. ಕಳೆಬರಹ ಪತ್ತೆಗೆ ಸ್ವಲ್ಪ ಸಮಯ ಹಿಡೀತು. ಫೋಟೋ ನೋಡಿ ದೇಹ ಗುರುತು ಪತ್ತೆ ಹಚ್ಚಿದೆವು. ದುರಾದೃಷ್ಟವಶಾತ್ ಏಳೂ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ರು.
ಮೂವರ ಮೃತದೇಹ ಮಧ್ಯಾಹ್ನ ಶಿಫ್ಟ್
ಜೆಡಿಎಸ್ ಮುಖಂಡ, ತುಮಕೂರು ನಿವಾಸಿ ರಮೇಶ್, ಅಡಕಮಾರನಹಳ್ಳಿಯ ಮಾರೇಗೌಡ ಹಾಗೂ ನೆಲಮಂಗಲ ಹಾರೋಕ್ಯಾತನಹಳ್ಳಿಯ ಪುಟ್ಟರಾಜು ಈ ಮೂವರ ಮೃತದೇಹಗಳು ಇಂದು ಮಧ್ಯಾಹ್ನ ಬೆಂಗಳೂರಿಗೆ ಶಿಫ್ಟ್ ಆಗಲಿದೆ ಎನ್ನಲಾಗಿದೆ.