ರಾಯಚೂರು: ದೀಪಾವಳಿಯ (Deepavali) ಬಲಿಪಾಡ್ಯಮಿ (Balipadyami) ಹಿನ್ನೆಲೆಯಲ್ಲಿ ಗುರುರಾಯರ ಸನ್ನಿಧಿ ಮಂತ್ರಾಲಯ (Mantralaya) ರಾಯರ ಮಠದಲ್ಲಿ ವಿಶೇಷ ಮಹಾಭಿಷೇಕ ಜರುಗಿತು.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು. ಮಠದಲ್ಲಿ ಶ್ರೀಬ್ರಹ್ಮ ಕರಾರ್ಚಿತ ಶ್ರೀಮೂಲ ರಾಮದೇವರು ಮತ್ತು ಇತರ ಸಂಸ್ಥಾನದ ವಿಗ್ರಹಗಳಿಗೆ ಮಹಾಭಿಷೇಕ ನೆರವೇರಿಸಿದರು. ಇದನ್ನೂ ಓದಿ: ದೀಪಾವಳಿ ವಿಶೇಷ – ಬಲಿಪಾಡ್ಯಮಿಯನ್ನು ಯಾಕೆ ಆಚರಿಸಲಾಗುತ್ತದೆ? ಏನಿದು ಪುರಾಣ ಕಥೆ?
ವರ್ಷಕ್ಕೆ ಎರಡು ಬಾರಿ ಮಾತ್ರ ಈ ಮಹಾಭಿಷೇಕ ನೆರವೇರಿಸಲಾಗುತ್ತದೆ. ಶ್ರೀರಾಮ ನವಮಿ ಹಾಗೂ ಬಲಿಪಾಡ್ಯಮಿಯ ದಿನ ಮಾತ್ರ ವಿಶೇಷ ಮಹಾಭಿಷೇಕ ನಡೆಯುತ್ತದೆ. ಈ ವೇಳೆ ಮಠದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ದೀಪಗಳ ಅಲಂಕಾರ ಮಾಡಿ ಪಟಾಕಿ ಸಿಡಿಸಿ ಜನ ಸಂಭ್ರಮಿಸುತ್ತಿದ್ದಾರೆ. ಪರಸ್ಪರ ಸಿಹಿ ಹಂಚಿಕೊಂಡು ದೀಪಾವಳಿ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಕಾರ್ತಿಕ ದೀಪೋತ್ಸವಂದು ದೀಪ ಬೆಳಗುವುದು ಯಾಕೆ? ಮಹತ್ವ ಏನು?
ದೀಪಾವಳಿಯನ್ನು (Deepavali) ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯವರೆಲ್ಲರೂ ಎಣ್ಣೆ ಸ್ನಾನ ಮಾಡುವ ನರಕ ಚತುದರ್ಶಿ, ಮರು ದಿವಸ ಅಮಾವಾಸ್ಯೆ, ಮೂರನೇ ದಿನವೇ ಬಲಿಪಾಡ್ಯಮಿ. ದೀಪಾವಳಿ ಬಲಿಪಾಡ್ಯಮಿಯೊಂದಿಗೆ (Balipadyami) ಈ ಮೂರು ದಿನಗಳ ಹಬ್ಬ ಮುಗಿಯುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ.