ಮಡಿಕೇರಿ: ಮನೆಯ ಮುಂದಿನ ಕೋಳಿಗಳಿಗೆ ಕಲ್ಲು ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಕತ್ತಿಯಿಂದ ಇರಿದಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗರಂಗದೂರು ಗ್ರಾಮದಲ್ಲಿ ನಡೆದಿದೆ.
ದಿನೇಶ್ (25) ಕತ್ತಿಯಿಂದ ಇರಿತಕೊಳ್ಳಗಾದ ಯುವಕ. ಆರೋಪಿ ಓಬಯ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ. ದಿನೇಶ್ ಮತ್ತು ಓಬಯ್ಯ ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ದಿನೇಶ್ ಗ್ರಾಮದ ಅಣ್ಣು ಎಂಬವರ ಮಗ. ಪಾನಮತ್ತನಾಗಿದ್ದ ಓಬಯ್ಯ ಮನೆ ಜಗಲಿ ಮೇಲೆ ಕುಳಿತು ದಿನೇಶ್ ಅವರ ಕೋಳಿಗಳಿಗೆ ಕಲ್ಲು ಎಸೆದಿದ್ದಾನೆ. ಇದರಿಂದ ಕೋಪಗೊಂಡ ದಿನೇಶ್ ಕಲ್ಲು ಏಕೆ ಎಸೆದು ಎಂದು ಓಬಯ್ಯನನ್ನು ಪ್ರಶ್ನಿಸಿದ್ದಾನೆ. ನಿಮ್ಮ ಕಲ್ಲು ನಮ್ಮ ಅಜ್ಜಿಗೆ ತಾಗುತ್ತಿತ್ತು ಎಂದು ಹೇಳಿದ್ದಾನೆ.
ಇಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಓಬಯ್ಯ ಮನೆಯಲ್ಲಿದ್ದ ಕತ್ತಿ ತಂದು ದಿನೇಶ್ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಬಿದ್ದ ದಿನೇಶ್ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಕೂಡಲೇ ಮೈಸೂರಿನ ಕೆ.ಆರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಕುಟುಂಬಸ್ಥರು ದಿನೇಶ್ ನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳು ದಿನೇಶ್ ನ ಮೂರು ಕರಳುಗಳು ತುಂಡಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ತೀವ್ರನಿಗಾಘಟಕದಲ್ಲಿರಿಸಲಾಗಿದೆ. ದಿನೇಶ್ ಸ್ಥಿತಿಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆರೋಪಿ ಓಬಯ್ಯನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.