ಚಿಕ್ಕೋಡಿ: ರಾಜಸ್ಥಾನದ ಮಿಲಿಟರಿ ನೆಲೆಯ 422ನೇ ಎಂಜಿನಿಯರ್ ಇಂಡಿಪೆಂಡೆಂಟ್ ಸ್ಕಾಡ್ ನ ಆರ್ಮರ್ ಟ್ಯಾಂಕ್ ಅಪಘಾತದಲ್ಲಿ ಯೋಧರೊಬ್ಬರು ಆಗಸ್ಟ್ 7ರಂದು ಮೃತಪಟ್ಟಿದ್ದರು.
ಚಿಕ್ಕೋಡಿ ತಾಲೂಕು ಕರೋಶಿ ಗ್ರಾಮದ ಯೋಧ ಬಸವರಾಜ ಗುರುಸಿದ್ದ ಉಪಾಸೆ ಅವರ ಪಾರ್ಥಿವ ಶರೀರ ಇಂದು ಬೆಳಗಿನ ಜಾವ 6 ಘಂಟೆಗೆ ಸ್ವಗ್ರಾಮ ಕರೋಶಿ ತಲುಪಿದೆ. ಗ್ರಾಮದ ಸಿಎಸ್ಎಸ್ ಪ್ರೌಢ ಶಾಲೆಯಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಿದ್ದು, ಸಾವಿರಾರು ಜನ ಭಾಗವಹಿಸಿದ್ರು. ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶಾಲಾ ಮಕ್ಕಳು ಸೇರಿದಂತೆ ಇಡೀ ಗ್ರಾಮಸ್ಥರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ರಾಯಬಾಗ ಶಾಸಕ ದುರ್ಯೊಧನ ಐಹೊಳೆ, ವಿವಿಧ ಮಠಾಧೀಶರು ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ದು, ಗ್ರಾಮದ ಪ್ರಮುಖ ರಸ್ತೆಯ ಮೂಲಕ ಅಂತಿಮ ಯಾತ್ರೆ ಮುಖಾಂತರ 11 ಘಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.