– ಸಿಬಿಐ ತನಿಖೆಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ
ನವದೆಹಲಿ: ರಾಮಮಂದಿರ ದೇಣಿಗೆ (Ram Mandir Donation) ಕಳ್ಳತನ ಪ್ರಕರಣದ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ (ಇಂದು) ನಿರಾಕರಿಸಿದೆ.
ಈ ವಿಷಯವನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದಿರುವ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್ ಮತ್ತು ಶೀಲ್ ನಾಗು ಅವರ ರಜಾ ಪೀಠ (ದ್ವಿಸದಸ್ಯ ಪೀಠ), ನ್ಯಾಯಾಲಯದ ಬೇಸಿಗೆ ರಜೆಯ ಬಳಿಕ ನಿಯಮಿತ ಪೀಠದ ಮುಂದೆ ಪಟ್ಟಿ ಮಾಡುವಂತೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಕರ್ಮಕಾಂಡದ ಬಗ್ಗೆ ಚಂಪತ್ ರಾಯ್ಗೆ ಮೊದಲೇ ಗೊತ್ತಿತ್ತು? – ದೂರು ದಾಖಲಾಗೋ ಮೊದಲೇ ತನಿಖೆ ಶುರುವಾಗಿತ್ತು!

ಸಿಬಿಐ ತನಿಖೆಗೆ ನಿರ್ದೇಶನ ಕೋರಿ ಅರ್ಜಿ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ವೀಕರಿಸಿದ ದೇಣಿಗೆಗಳ ದುರುಪಯೋಗದ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಮೇಲ್ವಿಚಾರಣೆಯಲ್ಲಿ ಕೇಂದ್ರ ತನಿಖಾ ದಳದ (CBI) ವಿಶೇಷ ತನಿಖಾ ತಂಡ (SIT) ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು, ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಭಕ್ತರು ನೀಡಿದ ದಾನ, ದೇಣಿಗೆ, ಆಸ್ತಿಗಳ ರಕ್ಷಣೆಯಾಗಬೇಕು. ರಕ್ಷಣೆ ಸಂಪೂರ್ಣ ಪಾರದರ್ಶಕತೆಯಿಂದ ಇರಬೇಕು. ಟ್ರಸ್ಟ್ ಮೇಲೆ ಅಪನಂಬಿಕೆ ಇರುವ ಸಮಯದಲ್ಲಿ ಲಕ್ಷಾಂತರ ಭಕ್ತರ ನಂಬಿಕೆ ಪುನಃಸ್ಥಾಪನೆ ಮಾಡಬೇಕಿದೆ. ಎಸ್ಐಟಿ ರಚನೆಯಾದರೂ ಎಫ್ಐಆರ್ ವಿಳಂಬವಾಗಿದೆ, ಎಣಿಕೆ ಕಾರ್ಯದಲ್ಲಿದ್ದ ಸದಸ್ಯರು ಅಪಾರ ಪ್ರಮಾಣ ಆಸ್ತಿ ಖರೀದಿಸಿದ್ದಾರೆ. ಈ ಹಿನ್ನಲೆ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದೂ ಕೋರಲಾಗಿತ್ತು. ಆದಾಗ್ಯೂ ಕೋರ್ಟ್ ತುರ್ತು ವಿಚಾರಣೆ ನಡೆಸಲು ನಿರಾಕರಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಗೋಸ್ವಾಮಿ, ಎಲೆಕ್ಟ್ರಾನಿಕ್ ಸಾಕ್ಷ್ಯಗಳು ನಾಶವಾಗುವ ಸಾಧ್ಯತೆ ಇದೆ. ಹಾಗಾಗಿ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ರು. ಇದನ್ನೂ ಓದಿ: Ram Temple Theft| ಆರೋಪಿಗಳ ಆಸ್ತಿ 100 ಪಟ್ಟು ಹೆಚ್ಚಳ; ಡಿಲೀಟ್ ಆಯ್ತು ಮೊಬೈಲ್ ಡೇಟಾ
ಪ್ರಕರಣದ ಪ್ರಸ್ತಾಪದ ಸಮಯದಲ್ಲಿ, ಏನು ಅರ್ಜೆಂಟು? ಎಂದು ಪ್ರಶ್ನಿಸಿದ ಪೀಠವು, ತಕ್ಷಣದ ಹಸ್ತಕ್ಷೇಪಗಳ ಅಗತ್ಯತೆಗಳನ್ನು ಪ್ರಶ್ನಿಸಿತು. ಸದ್ಯ ಸುಪ್ರೀಂ ಕೋರ್ಟ್ ಬೇಸಿಗೆ ರಜೆಯಲ್ಲಿದ್ದು, ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಅರ್ಜಿಯನ್ನ ಪಟ್ಟಿ ಮಾಡುವಂತೆ ಸೂಚಿಸಿತು. ಜುಲೈ 13 ರಿಂದ ಸಾಮಾನ್ಯ ವಿಚಾರಣೆ ಆರಂಭವಾಗಲಿದೆ.
140 ಜನರ ವಿಚಾರಣೆ ನಡೆಸಲಿರುವ ಎಸ್ಐಟಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಯೋಧ್ಯಾ ಪೊಲೀಸರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಹೇಳಿಕೆಯನ್ನ ದಾಖಲಿಸಿದ್ದಾರೆ. ಇದರ ಜೊತೆಗೆ ಅನೀಲ್ ಮಿಶ್ರಾ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಈ ನಡುವೆ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು ಈ ಇಬ್ಬರ ಮೇಲೆ ಪೊಲೀಸರ ಅನುಮಾನ ಹೆಚ್ಚಾಗುತ್ತಿದೆ.
ಪ್ರಾಥಮಿಕ ಹಂತದಲ್ಲಿ ಹಲವು ಜನರನ್ನ ವಿಚಾರಣೆ ನಡೆಸಿರುವ ಎಸ್ಐಟಿ ಇನ್ನಷ್ಟು ಜನರನ್ನು ವಿಚಾರಣೆಗೆ ಒಳಪಡಿಸಬಹುದು. ಒಟ್ಟು 140 ಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಿ ಅಂತಿಮ ವರದಿ ಸಿದ್ದಪಡಿಸಲು ಎಸ್ಐಟಿ ಅಧಿಕಾರಿಗಳ ತಯಾರಿ ಮಾಡಿಕೊಂಡಿದ್ದಾರೆ.
