ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ಪಕ್ಷದವರ ಕಿವಿ ಯಾವಾಗಲೂ ಹಸಿದವರ ಕೂಗಿಗೆ ತೆರದಿರುತ್ತದೆ ಎಂದು ಹಿರಿಯ ಸಾಹಿತಿ ನಾಡೋಜ ಹಂ.ಪ ನಾಗರಾಜಯ್ಯ (Hampana) ಹೇಳಿದ್ದಾರೆ.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ (Karnataka Kannada Writers and Publishers Association) 20ನೇ ವಾರ್ಷಿಕೋತ್ಸವದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯನವರು ಬಡವರ, ದೀನದಲಿತರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದ್ದಾರೆ. ಇದರ ವಿರುದ್ಧ ಅನೇಕ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಯೋಜನೆಗಳ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಮಾತನಾಡಬಾರದು ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ
ಅನ್ನಭಾಗ್ಯ ಯೋಜನೆಯ ಬಗ್ಗೆ ಸಾಕಷ್ಟು ಜನ ಸಾಕಷ್ಟು ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ ಉತ್ತಮವಾಗಿರುವುದರ ಬಗ್ಗೆ ಒಳ್ಳೆಯದನ್ನೇ ಮಾತನಾಡೋಣ. ಸಿದ್ದರಾಮಯ್ಯನವರು ನಡೆದುಬಂದ ದಾರಿ, ಅವರ ಸಾಧನೆ ಕರ್ನಾಟಕದ ಎತ್ತರಕ್ಕೆ ತಲುಪಬೇಕು ಎಂದಿದ್ದಾರೆ.
ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಬೇಗ ಹುಷಾರಾಗಲಿ ಎಂದು ಹಾರೈಸಿದ್ದಾರೆ. ಅಲ್ಲದೇ ಅವರು ಆದಷ್ಟು ಬೇಗ ಬಸ್ನಲ್ಲಿ ಪ್ರಯಾಣ ಮಾಡುವಂತಾಗಲಿ. ಪತ್ನಿ ಆಸ್ಪತ್ರೆಯಲ್ಲಿದ್ದರೂ, ಸಿದ್ದರಾಮಯ್ಯ ದೆಹಲಿಗೆ ಹೋಗಿ ಬಂದಿದ್ದಾರೆ. ಸಾರ್ವಜನಿಕ ವಲಯದಲ್ಲಿರುವವರು ಕೆಲವು ತ್ಯಾಗಕ್ಕೂ ತಯಾರಾಗಿ ಇರಬೇಕಾಗುತ್ತದೆ ಎಂದರು.
ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ (Mallika Ghanti) ಮಾತನಾಡಿ, ನಾನು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡುತ್ತೇನೆ. ಮಾತನಾಡಿದ್ದಕ್ಕೆ ನನ್ನ ಮೇಲೆ ಕೇಸ್ ಬಿದ್ದಿರುವ ರಾಜಕೀಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹಿಂದೆ ಮಾತಾಡಿದ್ದಕ್ಕೆ, ನಾಳೆ ನಾನು ಕೋರ್ಟ್ಗೆ ಹೋಗಬೇಕಿದೆ. ಹೆಣ್ಣು ಮಕ್ಕಳು ಮಾತನಾಡದ ಪರಿಸ್ಥಿತಿಯಲ್ಲಿ ಇಂದಿನ ದಿನಗಳನ್ನು ತಂದಿಟ್ಟಿದ್ದಾರೆ. ನಾನು ಮಾತನಾಡಿದ ಒಂದು ಸಾಲನ್ನ ಮಾತ್ರ ಮಾಧ್ಯಮಗಳು ಬಿತ್ತರಿಸುತ್ತವೆ. ಅದನ್ನೇ ಇಟ್ಟುಕೊಂಡು ವಾಟ್ಸಾಪ್ ಯೂನಿವರ್ಸಿಟಿ ಪ್ರಚಾರ ಮಾಡುತ್ತದೆ. ನಮಗೆ ಹೇಗೆ ಹೊಡೆಯುತ್ತಾರೆ ಎಂದರೆ, `ನಮ್ಮ ಕಡೆ ಹೇಳ್ತಾರೆ, ಸೀರೆ ಕಳಚಿ ಹೊಡೆಯೊದು ಎಂದು, ಆ ರೀತಿ ನಮಗೆ ಹೊಡೆಯುತ್ತಿದ್ದಾರೆ. ಹೀಗಾಗಿ ಬರೆದುಕೊಂಡು ಬಂದು ಮಾತಾನಾಡುತ್ತಿದ್ದೇನೆ’ ಎಂದು ಹೇಳಿದರು.
ಈ ವೇಳೆ ಸಾಹಿತ್ಯ, ಪ್ರಕಾಶಕರು, ಬರಹಗಾರ ಹಾಗೂ ಮುದ್ರಕರಿಗೆ ಸಹಾಯವಾಗುವ ರೀತಿಯಲ್ಲಿ ಬಜೆಟ್ನಲ್ಲಿ ಯೋಜನೆ ರೂಪಿಸಬೇಕು. ಅನೇಕ ಭಾಗ್ಯಗಳನ್ನು ನೀಡಿರುವ ಅವರು ಸಾಹಿತ್ಯ ಭಾಗ್ಯವನ್ನು ನೀಡಬೇಕು ಎಂದು ಸಂಘದಿಂದ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಡಸಾಲೆ ಪುಟ್ಟಸ್ವಾಮಿ ಉಪಸ್ಥಿತರಿದ್ದರು. ಇದನ್ನೂ ಓದಿ: ವ್ಹೀಲಿಂಗ್ ಮಾಡಿ ಶಾಲಾ – ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಮೂವರ ಬಂಧನ