ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಕೊಡಗಿನಲ್ಲಿ (Kodagu) ಹೂಮಳೆಯ ಸ್ವಾಗತ ಸಿಕ್ಕಿದೆ. ಕಳೆದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೊಡಗಿಗೆ ಆಗಮಿಸಿದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ನಡೆದಿತ್ತು. ಇದೀಗ ಹೂವಿನ ಸುರಿಮಳೆಯೊಂದಿಗೆ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದ್ದು, ಇದೇ ವಿಚಾರವನ್ನು ಅವರು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
`ವಿರೋಧ ಪಕ್ಷದ ನಾಯಕನಾಗಿ ಕೊಡಗಿಗೆ ಬಂದಿದ್ದಾಗ ಕೆಲವು ಕಿಡಿಗೇಡಿಗಳು ನನ್ನ ಮೇಲೆ ಮೊಟ್ಟೆ ಎಸೆದಿದ್ದರು. ಮುಖ್ಯಮಂತ್ರಿಯಾಗಿ ಇಂದು ಬಂದಾಗ ಕೊಡಗಿನ ಜನ ಸಮೂಹ ಪ್ರೀತಿಯ ಹೂಮಳೆಯಲ್ಲಿ ನನ್ನನ್ನು ಮುಳುಗಿಸಿದೆ. ಇದು ಕೊಡಗಿನ ಸಜ್ಜನರ ಗೆಲುವು, ಇದೇ ಪ್ರಜಾಪ್ರಭುತ್ವದ ಸೌಂದರ್ಯ’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಮ್ದು ಎರಡು ಬಾಗಿಲಿನ ಸಿಟಿ ಬಸ್.. ಯಾರು ಬೇಕಾದ್ರೂ ಹತ್ತಿ, ಇಳಿಯಬಹುದು: ಸಂತೋಷ್ ಲಾಡ್
ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಸಿದ್ದರಾಮಯ್ಯ, ವಿರಾಜಪೇಟೆಗೆ ಆಗಮಿಸಿದ್ದರು. ಬಳಿಕ ಅಂಬಟ್ಟಿ ಹೆಲಿಪ್ಯಾಡ್ನಿಂದ ಶಾಸಕ ಪೊನ್ನಣ್ಣ ಅವರು, ತಮ್ಮದೇ ಕಾರಿನಲ್ಲಿ ಸ್ವತಃ ತಾವೇ ಚಾಲನೆ ಮಾಡಿಕೊಂಡು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ.
ಸಿದ್ದರಾಮಯ್ಯ ಅವರನ್ನು, ಕೊಡಗಿನ ಸಾಂಪ್ರದಾಯಿಕ ಕೊಂಬು ಕೊಟ್ಸ್ ವಾಲಗದೊಂದಿಗೆ ಹಾಗೂ ಆದಿವಾಸಿ ತಂಡ ತಮ್ಮದೇ ಆದ ವಿಶಿಷ್ಟ ವಾದ್ಯದೊಂದಿಗೆ ಸ್ವಾಗತಿಸಿದರು. ಸಮಾವೇಶದ ಬಳಿಕ ಶಾಸಕ ಪೊನ್ನಣ್ಣ ಅವರು ಕೊಡಗಿನ ವಿಶೇಷ ತಿನಿಸುಗಳನ್ನು ಮುಖ್ಯಮಂತ್ರಿಗಳಿಗೆ ತಾವೇ ಸ್ವತಃ ಉಣಬಡಿಸಿದ್ದಾರೆ. ಇದನ್ನೂ ಓದಿ: ನಾನು ನಿಂತರೆ ಮಂಡ್ಯದಿಂದಲೇ.. ಇಲ್ಲ ಅಂದ್ರೆ ನನಗೆ ರಾಜಕೀಯವೇ ಬೇಡ: ಸುಮಲತಾ ಮಾತು