– ಶೆಟ್ಟರ್ ಕಾಂಗ್ರೆಸ್ ತೊರೆದಿದ್ದಕ್ಕೆ ‘ಕೈ’ ಸಚಿವರ ಮಾತು
ಧಾರವಾಡ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರು ಮರಳಿ ಬಿಜೆಪಿ (BJP) ಸೇರ್ಪಡೆಯಾಗಿರುವುದು ವೈಯಕ್ತಿಕವಾಗಿ ನನಗೆ ಖುಷಿ ತಂದಿದೆ. ಅವರು ಕಾಂಗ್ರೆಸ್ (Congress) ಬಿಟ್ಟು ಹೋಗಿರುವುದಕ್ಕೆ ನಮಗೇನೂ ನಷ್ಟವಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಅವರು ಯಾಕೆ ಕಾಂಗ್ರೆಸ್ಗೆ ಬಂದರೋ? ಯಾಕೆ ಪಾರ್ಟಿ ಬಿಟ್ಟು ಹೋದರೋ ಗೊತ್ತಿಲ್ಲ. ಆ ಬಗ್ಗೆ ಅವರನ್ನೇ ಕೇಳಬೇಕು. ಅವರು ಬಿಜೆಪಿ ಸೇರ್ಪಡೆಯಾಗಿರುವುದು ನನಗೆ ಖುಷಿ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ಧಾಂತಕ್ಕೆ ಬದ್ಧರಾದವರು ಬೇರೆ ಪಕ್ಷಕ್ಕೆ ಒಗ್ಗಲ್ಲ: ಶೆಟ್ಟರ್ ಬಿಜೆಪಿಗೆ ಮರಳಿದ್ದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ
ಶೆಟ್ಟರ್ ಪಕ್ಷಕ್ಕೆ ಬರುವಾಗ ಒಂದು ಹೇಳಿದ್ದರು. ಈಗ ನಮ್ಮ ಪಾರ್ಟಿ ಬಿಟ್ಟು ಹೋಗುವಾಗ ಮತ್ತೊಂದು ಹೇಳಿದ್ದಾರೆ. ಇದೆಲ್ಲ ರಾಜಕಾರಣದಲ್ಲಿ ಸಾಮಾನ್ಯವಾದದ್ದು. ಅವರು ಬಿಜೆಪಿ ಬಿಟ್ಟು ಬಂದಾಗ ಏನೇನು ಮಾತನಾಡಿದ್ದರೋ ಅದೆಲ್ಲ ಜನ ನೋಡಿದ್ದಾರೆ. ಕಾಂಗ್ರೆಸ್ ಅವರಿಗೆ ಗೌರವ ಕೊಟ್ಟು ಎಂಎಲ್ಸಿ ಮಾಡಿತ್ತು. ಪ್ರತಿಯೊಂದು ಸಭೆಯಲ್ಲಿ ಅವರಿಗೆ ಪಕ್ಷ ಗೌರವ ನೀಡುತ್ತಿತ್ತು. ಮರಳಿ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ಮೊದಲೇ ಹೊಗೆಯಾಡುತ್ತಿತ್ತು. ಈಗ ದಿಢೀರ್ ಆಗಿ ಪಕ್ಷ ತೊರೆದರು ಎಂದು ಅವರು ಹೇಳಿದ್ದಾರೆ.
ಅವರು ಒಬ್ಬ ಮಾಜಿ ಸಿಎಂ ಆಗಿ ಒಂದು ಸಿಸ್ಟಮ್ ಇರಬೇಕು. ಅವರು ಕಾಂಗ್ರೆಸ್ ಬಿಟ್ಟು ಹೋಗಿದ್ದಕ್ಕೆ ನಮಗೇನು ನಷ್ಟವಿಲ್ಲ. ನಮ್ಮದು ಎರಡು ಬಾಗಿಲಿನ ಸಿಟಿ ಬಸ್ ಇದ್ದಂತೆ ಯಾರು ಬೇಕಾದರೂ ಹತ್ತಬಹುದು ಯಾರು ಬೇಕಾದರೂ ಇಳಿಯಬಹುದು. ನಮ್ಮ ಪಾರ್ಟಿಗೂ ಇನ್ನೂ ಅನೇಕ ಶಾಸಕರು ಸೇರ್ಪಡೆಯಾಗಲಿದ್ದಾರೆ. ಆ ಸಮಯ ಬಂದಾಗ ತಿಳಿಯಲಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಹೋಗಲ್ಲ ಅಂದಿದ್ದ ಶೆಟ್ಟರ್ ಯಾಕೆ ಹೋಗಿದ್ದಾರೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್