ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸರಿಸಾಟಿ ಯಾರೂ ಇಲ್ಲ, ದೇವೇಗೌಡರ ಕುಟುಂಬ ಇನ್ನೊಂದು ಜನ್ಮ ಹುಟ್ಟಿ ಬಂದರೂ ಸಿದ್ದರಾಮಯ್ಯನವರ ಹೆಸರು ಕೆಡಿಸಲು ಸಾಧ್ಯವಿಲ್ಲ ಎಂದು ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಗುಡುಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಮಾತನಾಡಿದ ಅವರು, ಅಪುತ್ರಸ್ಯ ಗತಿರ್ನಾಸ್ತಿ ಎನ್ನುವ ಮಾತಿದೆ. ಅಂದರೆ ಗಂಡು ಮಕ್ಕಳಾಗದೇ ಮೋಕ್ಷವಿಲ್ಲ ಎಂದರ್ಥ. ಬಹುಶಃ ದೇವೇಗೌಡರಿಗೆ ಅರೆ ವಯಸ್ಸು, 80 ವರ್ಷ ಆಯ್ತು, ಮಕ್ಕಳು ಆಡಿದ ಹಾಗೆ ಆಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಯಾರೂ ಸರಿ ಸಾಟಿ ಇಲ್ಲ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ಕಾರಣ ಎಂಬ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಮಾಜಿ ಪ್ರಧಾನಿಗಳ ಬಗ್ಗೆ ಗೌರವ ಇದೆ. ವಯಸ್ಸಾದ ಮೇಲೆ ಮಕ್ಕಳಂತೆ ಆಡುತ್ತಾರೆ. ಹೀಗಾಗಿ ಅವರು ಮಕ್ಕಳಂತಾಗಿದ್ದಾರೆ. ಮಕ್ಕಳು ಹೇಗೆ ಆಡುತ್ತಾರೆ ಎಂದು ತಿಳಿದಿದೆಯಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ತಿವಿದರು.
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದರೆ ಬಹಳ ಖುಷಿ, ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಸಿದ್ದರಾಮಯ್ಯ ಸರ್ಕಾರದಲ್ಲಿ, ಸಚಿವ ಸಂಪುಟವೇ ಬಸವಣ್ಣನವರ ಅನುಭವ ಮಂಟಪದಂತಿತ್ತು. ಸದ್ಯದ ಸರಕಾರದ ಬಗ್ಗೆ ಏನೂ ಹೇಳುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಕಾರು ಮನೆ ಬೇಕಾದವರು ವಿರೋಧ ಪಕ್ಷದ ನಾಯಕರಾಗಲು ಪ್ರಯತ್ನಿಸುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ನಾನು ಇತ್ತೀಚೆಗೆ ಟಿವಿ, ಪತ್ರಿಕೆ ಗಮನಿಸಿಲ್ಲ. ಆ ರೀತಿ ಪರೋಕ್ಷವಾಗಿ ಮಾತನಾಡುವುದು ಸರಿಯಲ್ಲ. ಒಬ್ಬ ಪ್ರಬುದ್ಧ ರಾಜಕಾರಣಿ ಆಗಿ ಅವರೇ ಅರ್ಥ ಮಾಡಿಕೊಳ್ಳಬೇಕು ಎಂದರು.