ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಚಾರ್ಜ್ ಹಾಗೂ ಕೆಲ ಶಾಸಕರು ಹಳೆ ನೋಟುಗಳ ಬದಲಾವಣೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಒನ್ ಕೇಂದ್ರದ ಮೂಲಕ 2016 ನವೆಂಬರ್ ನಿಂದ 141 ದಿನಗಳಲ್ಲಿ 500 ಹಾಗೂ ಒಂದು ಸಾವಿರ ಮುಖ ಬಲೆಯ 410 ಕೋಟಿ ರೂ. ಹಳೆ ನೋಟುಗಳನ್ನು ಬದಲಾವಣೆ ಮಾಡಲಾಗಿದೆ. ಇದರಲ್ಲಿ ಸಿದ್ದರಾಮಯ್ಯ, ಡಿ.ಕೆ.ಜಾರ್ಜ್ ಹಾಗೂ ಶಾಸಕರು ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ, ಎಸಿಬಿ, ಜಾರಿ ನಿರ್ದೇಶನಾಲಯಕ್ಕೆ ರಮೇಶ್ ಅವರು ದೂರು ನೀಡಿದ್ದಾರೆ.
235 ಪುಟಗಳ ದಾಖಲೆ ಬಿಡುಗಡೆ ಮಾಡಿದ ಎನ್.ಆರ್.ರಮೇಶ್ ಅವರು, ಬೆಂಗಳೂರು ಒನ್ನಲ್ಲಿ 96 ವಿವಿಧ ಇಲಾಖೆಗಳ ಸೇವೆ ಮತ್ತು ಹಣ ಪಾವತಿ ವ್ಯವಸ್ಥೆ ಇದೆ. ಹೀಗಾಗಿ ಅಲ್ಲಿ ಪಾವತಿಯಾಗುತ್ತಿದ್ದ ಹಣವನ್ನು ತಾವು ಪಡೆದು, ನಿಷೇಧಗೊಂಡಿರುವ ನೋಟುಗಳನ್ನು ಅದರಲ್ಲಿ ಸೇರಿಸುವ ಮೂಲಕ ನೂರಾರು ಕೋಟಿ ಹಗರಣ ಮಾಡಲಾಗಿದೆ ಎಂದು ಅವರು ಆರೋಪಿಸಿದರು.