ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕನ್ನಡಕ್ಕೆ ಅಗ್ರಸ್ಥಾನ ನೀಡದ ಅಂಗಡಿ ಮುಂಗಟ್ಟುಗಳ ನಾಮಫಲಕಗಳ ತೆರವು ಕಾರ್ಯಾಚರಣೆ ಇಂದು ನಗರದ ಹಲವೆಡೆ ನಡೆಯಿತು.
ಆರೋಗ್ಯಾಧಿಕಾರಿ ಭಾಗ್ಯಲಕ್ಷ್ಮಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ತಂಡ ಭೇಟಿ ನೀಡಿದಾಗ ಕನ್ನಡ ನಾಮಫಲಕ ಹಾಕದ ಮಳಿಗೆಗಳ ಬೋರ್ಡ್ ತೆರವು ಮಾಡಲಾಯಿತು. ಈ ವೇಳೆ ಶಾಸಕರಿಂದ ಕರೆ ಮಾಡಿಸಿ ವ್ಯಾಪಾರಿಗಳು ಸಮಯವಾಕಾಶ ನೀಡುವಂತೆ ಒತ್ತಡ ತಂತ್ರವನ್ನು ಪ್ರಯೋಗಿಸಿದರು. ಆದರೆ ನಿಯಮವನ್ನು ವಿವರಿಸಿದ್ದೇವೆ ಎಂದು ಭಾಗ್ಯಲಕ್ಷ್ಮಿ ತಿಳಿಸಿದರು.
- Advertisement 2
- Advertisement 3
ಈ ಮಧ್ಯೆ ತೆರವಿನ ಭಯದಿಂದ ಹಲವು ವ್ಯಾಪಾರಿಗಳು ಖುದ್ದು ಅವರೇ ನಾಮಫಲಕ ತೆರವು ಮಾಡಿದ್ದರು. ಇನ್ನೂ ಕೆಲವರು ನಾಮಫಲಕದಲ್ಲಿನ ಇಂಗ್ಲಿಷ್ ಅಕ್ಷರ ಇರುವ ಭಾಗಕ್ಕೆ ಪೇಪರ್ ಹಾಕಿ ಮುಚ್ಚಿದ ಸನ್ನಿವೇಶವೂ ಎದುರಾಯಿತು. ಇತ್ತ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಸಂಬಂಧಿಗಳ ಜೈಲ್ ಹೋಟೆಲ್ ನಾಮಫಲಕದಲ್ಲೂ ಇಂಗ್ಲೀಷ್ ಕಾರುಬಾರು ಜೋರಾಗಿತ್ತು. ಈ ನಾಮಫಲಕವನ್ನು ಸಹ ತೆರವು ಮಾಡಲಾಯಿತು. ನಗರಾದ್ಯಂತ ಸುಮಾರು 800ಕ್ಕೂ ಹೆಚ್ಚು ಬೋರ್ಡ್ ಗಳನ್ನು ತೆರವು ಮಾಡಲಾಗಿದೆ ಎಂದು ವಲಯ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಮಾಹಿತಿ ನೀಡಿದರು.
- Advertisement 4
ಇಷ್ಟೆಲ್ಲ ಹೈಡ್ರಾಮಾದ ನಡುವೆ ಒತ್ತಡಕ್ಕೆ ಮಣಿದ ಅಧಿಕಾರಿಗಳು ತೆರವು ಮಾಡಿದ ನಾಮಫಲಕಗಳನ್ನು ಮತ್ತೆ ವ್ಯಾಪಾರಿಗಳಿಗೆ ಹಿಂತಿರುಗಿಸಿದ ಸನ್ನಿವೇಶ ನಡೆಯಿತು. ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡಕ್ಕೆ ಆದ್ಯತೆ ಕಡ್ಡಾಯ ವಿಚಾರ ಮುಂದಿನ ದಿನಗಳಲ್ಲಿ ಎಷ್ಟರಮಟ್ಟಿಗೆ ಅಳವಡಿಕೆಯಾಗುತ್ತದೆ? ಈ ಕಾರ್ಯಚರಣೆ ಹೇಗೆ ಫಲ ನೀಡುತ್ತದೆ ಎಂದು ಕಾದುನೋಡಬೇಕಿದೆ.