ಶಿವಮೊಗ್ಗ: ಪೊಲೀಸರದ್ದೇ 23 ಮೊಬೈಲ್ ಎಗರಿಸಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಪತ್ತೂರು ಮೂಲದ ಕಾರ್ತಿಕ್ (34) ಅಲಿಯಾಸ್ ಮಂಜ ಬಂಧಿತ ಖತರ್ನಾಕ್ ಕಳ್ಳನ. ಆರೋಪಿಯು ಸೆಪ್ಟೆಂಬರ್ ತಿಂಗಳಿನಲ್ಲಿಯೇ ಪೊಲೀಸರ ಮೊಬೈಲ್ಗಳನ್ನು ಕದ್ದು ತಲೆಮರಿಸಿಕೊಂಡಿದ್ದ. ಶನಿವಾರ ಸಿಕ್ಕಿಬಿದ್ದ ಆರೋಪಿಯಿಂದ 13 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಪೊಲೀಸರು ಬಂದೋಬಸ್ತ್ ಗಾಗಿ ಬಂದಿದ್ದರು. ಬಂದೋಬಸ್ತ್ ಮುಗಿಸಿ ನಗರದ ಭಾರತೀಯ ಸಮುದಾಯದ ಭವನದಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ಕಾರ್ತಿಕ್ 23 ಮೊಬೈಲ್ ಕದ್ದು ಪರಾರಿಯಾಗಿದ್ದ. ಈ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನಿಗೆ ಬಲೆ ಬೀಸಿದ್ದರು.
ಕೆಲ ಪೊಲೀಸರ ಮೊಬೈಲ್ಗಳನ್ನು ಟ್ರ್ಯಾಕ್ ಮಾಡಿದಾಗ ಆರೋಪಿ ಇರುವ ಜಾಗ ಪತ್ತೆಯಾಗಿತ್ತು. ಬಳಿಕ ತಂಡ ರಚಿಸಿ, ಚಲಿಸುತ್ತಿದ್ದ ರೈಲಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.