ನವದೆಹಲಿ: ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ `IAC ವಿಕ್ರಾಂತ್’ ಅನ್ನು ಇಂದು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ. ಇದೇ ವೇಳೆ ಭಾರತೀಯ ನೌಕಾಪಡೆಯು ಹೊಸ ಧ್ವಜವನ್ನು ಪರಿಚಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಧ್ವಜವನ್ನೂ ಅನಾವರಣಗೊಳಿಸಿದ್ದಾರೆ.
ಮರಾಠ ಸಾಮ್ರಾಜ್ಯದ ಚಕ್ರವರ್ತಿ ಶಿವಾಜಿಗೆ ಗೌರವ ಸೂಚಿಸುವ ಈ ಧ್ವಜವು ತಮ್ಮ ಆಳ್ವಿಕೆಯ ಕಾಲದಲ್ಲಿ ನೌಕಾಪಡೆಯನ್ನು ಹೊಂದಿದ್ದರು ಎಂಬುದನ್ನು ನೆಪಿಸುತ್ತದೆ. ಈ ನಿಟ್ಟಿನಲ್ಲಿಂದು ಭಾರತೀಯ ನೌಕಾಪಡೆಯು ಹೊಸ ಹೆಜ್ಜೆಯನ್ನಿರಿಸಿದೆ. ಇದನ್ನೂ ಓದಿ: ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್ಗೆ ಮೋದಿ ಚಾಲನೆ
ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದರೂ, ಭಾರತೀಯ ನೌಕಾಪಡೆಯ ಧ್ವಜದಲ್ಲಿ ಇನ್ನೂ ಉಳಿದುಕೊಂಡಿದ್ದ ವಸಾಹತುಶಾಹಿ ನೆನಪಿಸುವ ಅಂಶಗಳಿಗೆ ಇಂದು ತೆರೆ ಎಳೆಯಲಾಗಿದೆ. ಹೊಸ ಧ್ವಜ ಪರಿಚಯಿಸುವ ಮೂಲಕ ಗುಲಾಮಗಿರಿಯ ಸಂಕೇತ, ವಸಾಹತುಶಾಹಿಯ ಕುರುಹುಗಳನ್ನು ತೆಗೆದುಹಾಕಲಾಗಿದೆ.
ಭಾರತೀಯ ಕಡಲ ಪರಂಪರೆಗೆ ಅನುಗುಣವಾಗಿ ಈ ನೌಕಾಧ್ವಜ ನಿರ್ಮಾಣಗೊಂಡಿದ್ದು, `ನಿಶಾನ್’ ಎಂದು ಹೆಸರಿಡಲಾಗಿದೆ. ಇದು ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಪುಷ್ಠಿ ನೀಡುವ ಉದ್ದೇಶವನ್ನೂ ಹೊಂದಿದೆ.
ಈ ಹಿಂದಿನ ಧ್ವಜವು ಬಿಳಿಯ ಬಣ್ಣದಲ್ಲಿದ್ದು, ಲಂಬ ಮತ್ತು ಅಡ್ಡವಾಗಿ ಕೆಂಪು ಪಟ್ಟಿಗಳನ್ನು ಒಳಗೊಂಡಿತ್ತು. ಅದನ್ನು ಸೇಂಟ್ ಜಾರ್ಜ್ ಕ್ರಾಸ್ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಆಡಳಿತಗಾರರು ಅದನ್ನು ಹಾಕಿದ್ದರು. ಇದೀಗ ಸೇಂಟ್ ಜಾರ್ಜ್ ಶಿಲುಬೆಯನ್ನ ಹೊಸ ಭಾರತೀಯ ನೌಕಾ ಧ್ವಜದಿಂದ ತೆಗೆದುಹಾಕಲಾಗಿದೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್
ಹೊಸ ಧ್ವಜದ ಬಲಭಾಗದ ಮೂಲೆಯಲ್ಲಿ ಭಾರತೀಯ ನೌಕಾಪಡೆಯ ಹೊಸ ಚಿನ್ಹೆಯನ್ನೂ ಒಳಗೊಂಡಿದೆ. ದೇವನಾಗರಿ ಲಿಪಿಯಲ್ಲಿ `ಸತ್ಯ ಮೇವ ಜಯತೆ’ ಎಂಬ ರಾಷ್ಟ್ರೀಯ ಧ್ಯೇಯವಾಕ್ಯದೊಂದಿಗೆ ಭಾರತೀಯ ರಾಷ್ಟ್ರೀಯ ಲಾಂಚನವೂ ಇದರಲ್ಲಿದೆ. ಇದರ ಅಷ್ಟಭುಜಾಕೃತಿಯು 8 ದಿಕ್ಕುಗಳನ್ನು ಸೂಚಿಸುತ್ತದೆ. ಜೊತೆಗೆ ಶಿವಾಜಿಯ ರಾಜಮುದ್ರೆಯನ್ನೂ ಪರಿಚಯಿಸುತ್ತದೆ.