ರಾಯಚೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ಕಾರ್ಯಕ್ರಮದ ರನ್ನರ್ ಅಪ್ ಹನುಮಂತ ರಾಯಚೂರಿಗೆ ಆಗಮಿಸಿದ್ದ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.
ಕರ್ನಾಟಕದ ಮನೆ ಮಾತಾಗಿರುವ ಹನುಮಂತನನ್ನು ನೋಡಲು ಬಿಸಿಲನಾಡು ರಾಯಚೂರಿನಲ್ಲಿ ಜನ ಮುಗಿಬಿದ್ದರು. ರಾಯಚೂರಿನ ಮಸ್ಕಿಯಲ್ಲಿ ನಡೆದ ಸಂತ ಸೇವಾಲಾಲ್ ಮಹಾರಾಜ್ ಜಯಂತಿಗೆ ಮುಖ್ಯ ಅತಿಥಿಯಾಗಿ ಬಂದಿದ್ದ ಹನುಮಂತಣ್ಣನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಹನುಮಂತನಿಗೆ ಲಂಬಾಣಿ ಸಮಾಜದವರು ಅವರದೇ ಶೈಲಿಯ ಟೋಪಿ ಹಾಗೂ ಶಾಲು ಹಾಕಿ ಸನ್ಮಾನಿಸಿದರು. ಮಸ್ಕಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆದ ಬಂಜಾರ್ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಹನುಮಂತನಿಗೆ ಕೈಬೀಸಿ ಜನ ಅಭಿಮಾನ ಮೆರೆದು ಸೆಲ್ಫಿಗಾಗಿ ಮುಗಿಬಿದ್ದರು. ಅಲ್ಲದೇ ಮನೆ, ಕಟ್ಟಡಗಳ ಮೇಲೆ ನಿಂತು ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಕುತೂಹಲದ ಕಣ್ಣುಗಳಿಂದ ಬಿಸಿಲಲ್ಲಿ ಕಾದು ಹನುಮಂತನನ್ನು ನೋಡಿ ಖುಷಿಪಟ್ಟರು.
ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಸಂತ ಸೇವಾಲಾಲ ಜಯಂತಿಯನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸರಿಗಮಪ ಸೀಸನ್ 15ರ ರನ್ನರಪ್ ಹನುಮಂತ ಹಾಗೂ ಸೀಸನ್ 13ರ ಚಾಂಪಿಯನ್ ಸುನಿಲ್ ಗುಜಗುಂಡ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದರು. ಆ ಕಾರ್ಯಕ್ರಮದಲ್ಲಿ ಹನುಮಂತ ಅವರೇ ಕೇಂದ್ರ ಬಿಂದುವಾಗಿದ್ದರು. ಹನುಮಂತ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಯಡ್ರಾಮಿ ಪಟ್ಟಣದ ಪ್ರಮುಖ ವೃತಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಗೌರವಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv