ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಬಾ ದೇವಾಲಯ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ನಿಮಿಷಾಂಬಾ ದೇವಿ ಯಾವುದೇ ಭಕ್ತರು ವರ ಕೇಳಿದ್ರೆ ನಿಮಿಷದಲ್ಲಿ ನೆರವೇರಿಸುತ್ತಾಳೆ ಎಂಬುದು ಭಕ್ತರ ನಂಬಿಕೆ. ಆದ್ರೆ ದೇವಿಗೆ ಭಕ್ತರು ನೀಡುವ ಕಾಣಿಕೆ ಸೀರೆಗಳೇ ಕಳ್ಳತನವಾಗುತ್ತಿದ್ದು, ದೇವಾಲಯದ ಸಿಸಿಟಿವಿ ದೃಶ್ಯಗಳು ಕೂಡ ಅನುಮಾನಕ್ಕೆ ಸಾಕ್ಷಿ ಎಂಬಂತಿವೆ.
ನಿಮಿಷಾಂಬಾ ದೇವಾಲಯಕ್ಕೆ ದೇಶ ವಿದೇಶಗಳಿಂದ ಬರುವ ಭಕ್ತರು ತಾಯಿ ನಮಗೆ ಒಳ್ಳೆಯದು ಮಾಡು ಎಂದು ಸೀರೆ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಭಕ್ತರು ನೀಡಿದ ಸೀರೆಗಳನ್ನು ಸಾರ್ವಜನಿಕರು ಖರೀದಿಸಲು ಅವಕಾಶವಿದೆ. ಸೀರೆ ಮಾರಾಟದ ಮೂಲಕ ದೇವಾಲಯದ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ.
ಈ ಹಿಂದೆ ದೇವಾಲಯದ ಅರ್ಚಕರಾಗಿದ್ದ ಸೂರ್ಯನಾರಾಯಣ ಭಟ್ ಮೇಲೆ ಸೀರೆ ಕಳವು ಆರೋಪ ಕೇಳಿಬಂದಿತ್ತು. ಆದ್ರೆ ಆರೋಪ ನಿರಾಕರಿಸಿರುವ ಸೂರ್ಯನಾರಾಯಣ ಭಟ್, ನಾನು ದೇವಾಲಯದ ಸೀರೆಯನ್ನು ದುಡ್ಡು ಕೊಟ್ಟು ತೆಗೆದುಕೊಂಡು ಹೋಗಿದ್ದೇನೆ. ಅದಕ್ಕೆ ನನ್ನ ಬಳಿ ಬಿಲ್ ಇದೆ. ಆದ್ರೆ ಬೇರೆಯವರ ತಪ್ಪನ್ನು ಮುಚ್ಚಿಹಾಕಲು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ತಮ್ಮ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣದ ದಿಕ್ಕು ತಪ್ಪಿಸಲು ಹೊರಟವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ರು.
ಅರ್ಚಕ ಸೂರ್ಯನಾರಾಯಣ ಭಟ್ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ನಡುವೆಯೇ ದೇವಾಲಯದ ಸಿಸಿಟಿವಿ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡುವವರಲ್ಲಿ ಕೆಲವರು ತಮ್ಮ ಪಾಡಿಗೆ ತಾವು ಸೀರೆಯನ್ನು ಬಿಲ್ ಹಾಕಿಸದೇ ತೆಗೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಅದರ ಜೊತೆಗೆ ಈ ಹಿಂದೆ ಸೀರೆ ಕಳ್ಳತನದ ಆರೋಪದ ಮೇಲೆ ಪುಟ್ಟು ಎಂಬವರನ್ನು ದೇವಾಲಯದ ಕೆಲಸದಿಂದ ವಜಾ ಮಾಡಲಾಗಿತ್ತು. ಆದ್ರೆ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯದಲ್ಲಿ ಕೆಲಸದಿಂದ ವಜಾಗೊಂಡ ಪುಟ್ಟುವಿನ ರೀತಿ ಹಲವರು ದೇವಾಲಯದ ಸೀರೆ ಕದಿಯುತ್ತಿರಬಹುದೆಂಬ ಅನುಮಾನ ಮೂಡಿದೆ.
ದೇವಾಲಯದಲ್ಲಿ ಸೀರೆ ಕಳುವಾಗುತ್ತಿದೆ ಎಂಬ ಮಾತು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಅಧಿಕಾರಿಗಳು ಈ ಕೂಡಲೇ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆ ಮೂಲಕ ದೇವಾಲಯದ ಪಾವಿತ್ರ್ಯತೆ ಕಾಪಾಡಬೇಕೆಂದು ಭಕ್ತರು ಆಗ್ರಹಿಸುತ್ತಿದ್ದಾರೆ.