ಬೆಂಗಳೂರು: ಒಳ್ಳೆ ಹುಡುಗ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಸೀಸನ್ 4 ವಿನ್ನರ್ ಪ್ರಥಮ್ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಿಗ್ ಬಾಸ್ ಗೆಲುವಿನ ನಂತರ ಮುಂದೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ವ್ಯವಸಾಯ ಮಾಡುತ್ತೇನೆ ಎಂದು ಹೇಳಿದ್ದರು. ಆಗ ಅವರ ಮಾತನ್ನು ಕೇಳಿದ ಕೆಲವರು ನಕ್ಕಿದ್ದರು. ಆದರೆ ಇಂದು ಕೃಷಿಯಲ್ಲೇ ಪ್ರಥಮ್ ಬ್ಯುಸಿಯಾಗಿದ್ದಾರೆ. ದುಡುಮೆಯನ್ನು ನಂಬಿ ಬದುಕುತ್ತಿದ್ದಾರೆ.
ಪ್ರಥಮ್ ಅವರ ಸಿನಿಮಾ ಕೆಲಸಗಳ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ಇರಬಹುದು. ಆದರೆ ಕೃಷಿ ಕೆಲಸ ಏನಾಯ್ತು ಎಂಬ ಪ್ರಶ್ನೆ ಮೂಡುವುದು ಸಹಜ. ‘ಬಿಗ್ ಬಾಸ್ ಕನ್ನಡ ಸೀಸನ್ 4’ ಮುಗಿದು ವರ್ಷಗಳೇ ಕಳೆದವು. ಆದರೆ ಪ್ರಥಮ್ ಮಾತ್ರ ತಾವು ಹೇಳಿದ್ದ ಮಾತನ್ನು ಮರೆತಿಲ್ಲ. ಕೊಳ್ಳೇಗಾಲದಿಂದಾಚೆ ಒಂದು ಪುಟ್ಟ ಗ್ರಾಮದಲ್ಲಿ ಭೂಮಿ ಖರೀದಿಸಿ ವ್ಯವಸಾಯ ಮಾಡಿ ಜೋಳ, ಹುರುಳಿಕಾಳು ಬೆಳೆ ಬೆಳೆದು, ಇದರಿಂದಾಗಿ 2.5 ಲಕ್ಷ ರೂ. ಲಾಭ ಮಾಡಿದ್ದಾರಂತೆ.
ಹೌದು, ದೇವ್ರಂಥ ಮನುಷ್ಯ, ಎಮ್ಎಲ್ಎ, ನಟಭಯಂಕರ ಇತ್ಯಾದಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ಪ್ರಥಮ್, ವ್ಯವಸಾಯ ಮಾಡಲು ಹಣ ಹಾಕಿದ್ದಾರೆ. ಆದರೆ ಇದರ ಪೂರ್ಣ ಜವಾಬ್ದಾರಿ ಹೊತ್ತವರು ಅವರ ತಂದೆ. ತಿಂಗಳಲ್ಲಿ ಮೂರು ಬಾರಿ ಊರಿಗೆ ಹೋಗಿ ವ್ಯವಸಾಯ ಏನಾಯ್ತು ಎಂಬುದರ ಕಡೆ ಪ್ರಥಮ್ ಗಮನವಿಟ್ಟಿದ್ದರು. ನಾಲ್ಕು ಎಕರೆ ಭೂಮಿಯಲ್ಲಿ ಹುರುಳಿ ಹಾಗೂ ಜೋಳದ ಭರ್ಜರಿ ಬೆಳೆ ಬೆಳೆದಿದ್ದಾರೆ.
ಕೃಷಿ ಜೊತೆಗೆ ತಮ್ಮ ಸಿನಿಮಾದಲ್ಲಿಯೂ ನಿರತರಾಗಿದ್ದಾರೆ. ಅಲ್ಲದೆ ಕನ್ನಡದ ಹಲವು ಸಿನಿಮಾಗಳನ್ನು ನೋಡಿ ಅವುಗಳ ಬಗ್ಗೆ ಪ್ರಥಮ್ ತಮ್ಮ ಅಭಿಪ್ರಾಯ ಹೇಳುತ್ತಾರೆ. ಸರ್ಕಾರಿ ಶಾಲಾ ಮಕ್ಕಳ ಕಾರ್ಯಕ್ರಮವಿರಲಿ, ಇನ್ನಾವುದೇ ಕಾರ್ಯಕ್ರಮವಿರಲಿ ಪ್ರಥಮ್ ಹೋಗುತ್ತಾರೆ. ಈ ಮೂಲಕ ಸದಾ ಆ್ಯಕ್ಟಿವ್ ಆಗಿದ್ದಾರೆ.
ಅಲ್ಲದೆ ಅವರೇ ಅಭಿನಯಿಸಿ, ನಿರ್ದೇಶನ ಮಾಡಿರುವ ನಟಭಯಂಕರ ಸಿನಿಮಾ ಕೆಲಸ ನಡೆಯುತ್ತಿದೆ. ಈಗಾಗಲೇ ಹಾಡಿನ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದ್ದು, ಕುರಿ ಪ್ರತಾಪ್, ಲೀಲಾವತಿ, ಸಾಯಿಕುಮಾರ್, ಶೋಭರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾಗೆ ನಟ ಉಪೇಂದ್ರ, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ ಮುಂತಾದ ಸ್ಟಾರ್ ನಟರು ಬೆಂಬಲ ಸೂಚಿಸಿದ್ದಾರೆ. ಸುಶ್ಮಿತಾ, ಅನುಪಮಾ ದೇವಗುಡಿ ಈ ಚಿತ್ರದ ನಾಯಕಿಯರಾಗಿದ್ದಾರೆ.