ಮೈಸೂರು: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಗ್ಗೆ ಮಾಜಿ ಸಚಿವ ಸಾರಾ ಮಹೇಶ್ ಸಾಫ್ಟ್ ಕಾರ್ನಾರ್ ತೋರಿದ್ದು, ವಿಶ್ವನಾಥ್ ಈಗಲೇ ನೋವಿನಲ್ಲಿದ್ದಾರೆ ಬಿಡಿ ವಿಡಿಯೋ ಬಿಡುಗಡೆ ಮಾಡುವುದು ಬೇಡ ಎಂದು ಸಾಗ ಹಾಕಿದ್ದಾರೆ.
ಮಾಜಿ ಸಚಿವ ಸಾರಾ ಮಹೇಶ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಮೂರು ವಿಚಾರಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಾಜಿ ಸಚಿವ ಎಚ್.ವಿಶ್ವನಾಥ್ ಬಗ್ಗೆ ದಾಖಲೆ ಬಿಡುಗಡೆ, ಜೆಡಿಎಸ್ ನ ಕೆಲ ಶಾಸಕರು ಪಕ್ಷ ಬಿಡುವ ವಿಚಾರ ಹಾಗೂ ಕೆ.ಆರ್.ನಗರದಲ್ಲಿ ನಡೆದಿದ್ದ ಗಲಾಟೆ ಸಂಬಂಧದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ವಿಶ್ವನಾಥ್ ಕುರಿತು ದಾಖಲೆ ಬಿಡುಗಡೆ ಮಾಡುವುದನ್ನು ನಿರಾಕರಿಸಿದ್ದಾರೆ. ಸದ್ಯ ವಿಶ್ವನಾಥ್ ಅವರೇ ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅದೆಲ್ಲ ಬೇಡ. ಮುಂದೆ ನೋಡೋಣ ಬಿಡಿ ಎಂದು ಹೇಳಿದರು.
ಸಾಲಿಗ್ರಾಮ ಕೋಮು ಗಲಾಟೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ಇನ್ನೂ ಯಾವುದೇ ಶಾಂತಿ ಸಭೆ ಏರ್ಪಟ್ಟಿಲ್ಲ. ಹೆಸರ ಹಿಂದೆ ಸಾ.ರಾ. ಇದ್ದವರೆಲ್ಲ ನನ್ನ ಸಹೋದರರಾಗಲ್ಲ. ಸಾಲಿಗ್ರಾಮದಲ್ಲಿ ಯಾರ ತಂದೆ ರಾಮೇಗೌಡ ಆಗಿರುತ್ತಾರೋ ಅವರ ಹೆಸರ ಹಿಂದೆ ಸಾ.ರಾ. ಅಂತ ಇರುತ್ತದೆ. ನನ್ನ ಒಬ್ಬ ಸಹೋದರ ಮಾತ್ರ ಪ್ರಕರಣದಲ್ಲಿ ಸಿಲುಕಿದ್ದಾನೆ. ಒಬ್ಬ ಸಹೋದರ ಜಿ.ಪಂ. ಸದಸ್ಯ ಆಗಿದ್ದಾನೆ. ಈಗ ಪ್ರಕರಣದಲ್ಲಿ ಸಿಲುಕಿರುವ ಸಹೋದರ ಯಾರು ಎಂಬುದೇ ಗೊತ್ತಿಲ್ಲ. ಆದರೆ ಈಗ ಎಲ್ಲರಿಗೂ ಆತನ ಬಗ್ಗೆ ಗೊತ್ತಾಗುವಂತೆ ಆಗಿದೆ ಎಂದರು.
ಇಡೀ ಪ್ರಕರಣವನ್ನು ವಿರೋಧ ಪಕ್ಷದ ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಶಾಸಕ ಆಗುವುದಕ್ಕೂ ಮೊದಲಿನಿಂದ ಸಾಲಿಗ್ರಾಮದಲ್ಲಿ ಇಂತಹ ಘಟನೆಗಳು ನಡೆದಿವೆ. ಹಿಂದೆ ಗೋಲಿಬಾರ್ ಸಹ ಆಗಿದೆ. ನನ್ನನ್ನು ಶಾಸಕ ಮಾಡಿದ ಮೇಲೆ ಸ್ವಲ್ಪ ಹತೋಟಿಗೆ ಬಂದಿದೆ. ಎರಡೂ ಕಡೆಯ ಹಲವು ಮಂದಿ ತಲೆ ಮರೆಸಿಕೊಂಡಿದ್ದಾರೆ. ಅವರೆಲ್ಲ ಸಿಕ್ಕ ನಂತರ ಒಂದು ಕಡೆ ಕುಳಿತು ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ನ ಮತ್ತಿಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಜೆಡಿಎಸ್ ಪಕ್ಷವನ್ನು ಯಾರೂ ಬಿಟ್ಟು ಹೋಗುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರ. ಎಲ್ಲರೊಂದಿಗೆ ನಿತ್ಯ ಮಾತನಾಡುತ್ತಲೇ ಇದ್ದೇವೆ. ಹಲವರು ನಿನ್ನೆ ಕೂಡ ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಮ್ಮ ಪಕ್ಷವನ್ನು ಯಾರೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.