ಬೆಂಗಳೂರು: ಸಿಲಿಕಾನ್ ಸಿಟಿಯ ಕುಖ್ಯಾತ ರೌಡಿಶೀಟರ್ ಯಶಸ್ವಿನಿ ಗೌಡ ಜೊತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಖಾತೆಯ ಸಚಿವ ಕೆ.ಎಸ್. ಈಶ್ವರಪ್ಪ ವೇದಿಕೆ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಟೌನ್ ಹಾಲ್ನಲ್ಲಿ ಶ್ರೀರಾಮ ಸೇನಾ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯಪುರದ ರೌಡಿಶೀಟರ್ ಆಗಿರುವ ಯಶಸ್ವಿಗೌಡ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈಶ್ವರಪ್ಪ ಹಿಂದೆ ಯಶಸ್ವಿನಿ ಗೌಡ ನಿಂತಿದ್ದರು. ನಂತರ ಆಕೆಯನ್ನು ಈಶ್ವರಪ್ಪ ಮುಂದೆ ಕರೆದು ಅವರಿಂದ ದೀಪ ಬೆಳಗಿಸಿದ್ದಾರೆ. ಹೀಗಾಗಿ ಈಕೆಯ ಬಗ್ಗೆ ಈಶ್ವರಪ್ಪಗೆ ಗೊತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಹಣ ಕೊಟ್ಟು ಡಾಕ್ಟರೇಟ್ ಪಡೆದ ರೌಡಿಶೀಟರ್ ಯಶಸ್ವಿನಿ ಗೌಡ?
ಈ ಹಿಂದೆಯೇ ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಯಶಸ್ವಿನಿ ಗೌಡಳನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಆಕೆಗೂ ಹಾರ, ಶಾಲು ಹಾಕಿ ಸ್ವಾಗತ ಕೋರಲಾಗಿದೆ. ವೇದಿಕೆಯಲ್ಲಿ ಸಚಿವ ಈಶ್ವರಪ್ಪ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ
ಈಶ್ವರಪ್ಪ ಪ್ರತಿಕ್ರಿಯೆ: ದೇಶಭಕ್ತರು ಎಂದು ಬಂದಿದ್ದೆ, ಆದರೆ ರೌಡಿಶೀಟರ್, ಪೌಡಿಶೀಟರ್ ಗೊತ್ತಿಲ್ಲ. ನಿಮ್ಮಲ್ಲೇ ರೌಡಿಶೀಟರ್ ಇದ್ದರೆ ಯಾರಿಗೆ ಗೊತ್ತು. ನನಗೆ ರೌಡಿಶೀಟರ್ ಬಗ್ಗೆ ಮಾಹಿತಿ ಇರಲಿಲ್ಲ. ಸೌಜನ್ಯವಾಗಿ ಕರೆದಿದ್ದರು, ಹೀಗಾಗಿ ಬಂದು ಹೋಗುತ್ತೀದ್ದೇನೆ ಎಂದು ರೌಡಿಶೀಟರ್ ಜೊತೆಗೆ ವೇದಿಕೆ ಹಚ್ಚಿಕೊಂಡ ಬಗ್ಗೆ ಸ್ಪಷ್ಟನೆ ಕೊಡುವಾಗ ಈಶ್ವರಪ್ಪ ಗರಂ ಆದರು.
ಯಶಸ್ವಿನಿ ಗೌಡ ಸ್ವತಃ ಪತಿಯನ್ನೇ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈಕೆಯ ಎರಡನೇ ಪತಿ ದಡಿಯಾ ಮಹೇಶ್ ಕೂಡ ರೌಡಿಶೀಟರ್ ಆಗಿದ್ದನು. ಯಶಸ್ವಿಗೌಡ ಮೀಟರ್ ಬಡ್ಡಿ ದಂಧೆಯನ್ನು ನಡೆಸುತ್ತಿದ್ದ ಆರೋಪ ಕೇಳಿ ಬಂದಿತ್ತು. ರಾಬರಿ, ಧಮ್ಕಿ ಕೊಲೆಯತ್ನ ಸೇರಿ ಹಲವು ಪ್ರಕರಣಗಳು ಈಕೆಯ ಮೇಲಿವೆ.