ಹೈದರಾಬಾದ್: ಎಟಿಎಂಗೆ ಹಾಕಲು ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಬರೋಬ್ಬರಿ 58 ಲಕ್ಷ ರೂ. ಹಣವನ್ನು ಖದೀಮರ ಗುಂಪೊಂದು ಬ್ಯಾಂಕ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಗಮನವನ್ನು ಬೇರೆಡೆಗೆ ತಿರುಗಿಸಿ ದರೋಡೆ ಮಾಡಿದೆ.
ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಗಮನವನ್ನು ತಿರುಗಿಸುವ ಮೂಲಕ ಸುಮಾರು 58 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ. ಮಂಗಳವಾರ ವನಸ್ಥಳಿಪುರಂ ಪ್ರದೇಶದಲ್ಲಿನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣವನ್ನು ತುಂಬಲು ಬ್ಯಾಂಕ್ ಸಿಬ್ಬಂದಿ ಹೋಗುತ್ತಿದ್ದರು. ಈ ವೇಳೆ ಚಾಲಾಕಿ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.
ವಾಹನದ ಇನ್ನೊಂದು ಕಡೆಯಲ್ಲಿ ಹಣ ಬಿದ್ದಿದೆ ಎಂದು ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕ್ ಸಿಬ್ಬಂದಿಯ ಗಮನವನ್ನು ಖದೀಮರ ತಂಡ ಅತ್ತಕಡೆ ತಿರುಗಿಸಿದೆ. ಬಳಿಕ ಅವರ ಕಣ್ತಪ್ಪಿಸಿ ವಾಹನದಿಂದ 58 ಲಕ್ಷ ರೂ. ತುಂಬಿದ್ದ ಬಾಕ್ಸ್ ನ್ನು ಕದ್ದು ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಎಲ್ಬಿ ನಗರ ಡಿಸಿಪಿ ಸುನ್ಪ್ರೀತ್ ಸಿಂಗ್, “ಮಂಗಳವಾರ ಮಧ್ಯಾಹ್ನದ ಹೊತ್ತಿಗೆ 5ರಿಂದ 6 ಮಂದಿ ಖದೀಮರು ಹಣವನ್ನು ಕೊಂಡೊಯ್ಯುತ್ತಿದ್ದ ಭದ್ರತಾ ಮತ್ತು ಬ್ಯಾಂಕ್ ಸಿಬ್ಬಂದಿಯನ್ನು ಯಾಮಾರಿಸಿ, ವಾಹನದಿಂದ 58 ಲಕ್ಷ ರೂಪಾಯಿಗಳು ತಿಂಬಿಟ್ಟಿದ್ದ ಪೆಟ್ಟಿಗೆಯನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದರು.
ಈ ಘಟನೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ನಾವು ಘಟನೆ ನಡೆದಿದ್ದ ಸ್ಥಳದ ಹತ್ತಿರದಲ್ಲಿದ್ದ ಸಿ.ಸಿ.ಟಿ.ವಿ ದೃಶ್ಯಗಳನ್ನು ಕೂಡ ಪರಿಶೀಲಿಸಿದ್ದೇವೆ ಎಂದು ಸಿಂಗ್ ಹೇಳಿದರು.