ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರಶೇಖರ್ (Chandrashekhar) ಶವವಾಗಿ ಪತ್ತೆಯಾಗಿದ್ದು, ಮಗನ ಶವ ನೋಡುತ್ತಿದ್ದಂತೆಯೇ ಶಾಸಕರು ಗೋಳಾಡಿದ್ದಾರೆ.
ಭಾವನಾತ್ಮಕವಾಗಿ ಮಾತನಾಡುತ್ತಾ ನಿನ್ನ ಸಾವಿಗೆ ನಾನೇ ಕಾರಣ. ಚಂದ್ರು.. ಚಂದ್ರು.. ಎಂದು ಕಾರನ್ನು ಬಡಿದು ಕಣ್ಣೀರು ಹಾಕಿದ್ದಾರೆ.
ಯಾರು ಶವ ಅಂತ ಅನ್ನಬೇಡಿ, ಚಂದ್ರು ಅಂತ ಕರೀರಿ. ಚಂದ್ರು ನನ್ನ ಕರ್ಕೊಳೋ, ನೀನಿಲ್ಲದ ಜೀವ ಹೇಗೆ ಇರ್ಲೋ ಎಂದು ಗೋಳಾಡಿದ್ದಾರೆ. ನಮ್ಮ ಮನೆಯ ದೀಪ ಹಚ್ಚುತ್ತಿದ್ದೆ ನೀನು. ಅಲ್ಲದೆ ನನ್ನ ಶವಕ್ಕೆ ನೀನು ಬೆಂಕಿ ಇಡಬೇಕಿತ್ತು ಎಂದು ಹೇಳುತ್ತಾ ತಮ್ಮ ಮಗನನ್ನು ಅಪ್ಪಿಕೊಂಡು ರೇಣುಕಾಚಾರ್ಯ ಕಣ್ಣೀರಾಗಿದ್ದು, ನೆರೆದವರ ಕಣ್ಣಲ್ಲೂ ನೀರು ತರಿಸುವಂತಿತ್ತು.
ಚಂದ್ರಶೇಖರ್ ಅವರ ಕ್ರೇಟಾ ಕಾರು ಸೊರಟೂರು ಬಳಿ ಇರುವ ತುಂಗಾಭದ್ರ ಕಾಲುವೆಯಲ್ಲಿ ಸಿಕ್ಕಿದೆ. ಹೊನ್ನಾಳಿ (Honnalli) ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆ (Canal) ಯಲ್ಲಿ ಪತ್ತೆಯಾದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಕಾರಿನಲ್ಲೇ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರು ಪತ್ತೆಯಾದ ವಿಚಾರ ತಿಳಿದು ರೇಣುಕಾಚಾರ್ಯ ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದಾರೆ.
ಸ್ಥಳೀಯ ನಿವಾಸಿಗಳು ಕಾಲುವೆಯಲ್ಲಿ ಕಾರು ಬಿದ್ದಿದೆ ಎಂಬ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕ್ರೇನ್ (Crane) ಮೂಲಕ ಕಾರನ್ನು ಮೇಲಕ್ಕೆ ಎತ್ತಿದ್ದಾರೆ. ಇದನ್ನೂ ಓದಿ: 5 ದಿನಗಳ ಬಳಿಕ ರೇಣುಕಾಚಾರ್ಯ ಸಹೋದರನ ಪುತ್ರನ ಶವ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆ
ಕಾರಿನ ಏರ್ ಬ್ಯಾಗ್ ತೆರೆದಿದ್ದು, ಹಿಂಭಾಗದಲ್ಲಿ ಶವ ಪತ್ತೆಯಾಗಿದೆ. ಮುಂಭಾಗದ ಗಾಜು ಒಡೆದಿದ್ದರೆ ಹಿಂಭಾಗದಲ್ಲಿ ಕಾರು ನಜ್ಜುಗುಜ್ಜಾಗಿದೆ. ಹೀಗಾಗಿ ಇದು ಅಪಘಾತವೇ ಅಥವಾ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಬಿದ್ದಿದ್ಯಾ ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕಿದೆ.