ಧಾರವಾಡ: ಜಿಲ್ಲೆಯ ರಂಗಾಯಣದ ನೂತನ ನಿರ್ದೇಶಕರಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಮೇಶ್ ಪರವಿನಾಯ್ಕರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಸ್ವಿಕರಿಸಿದ ಬಳಿಕ ಮಾತನಾಡಿದ ಅವರು, ನಾನೂ ರಂಗಭೂಮಿ ಕುಟುಂಬದಿಂದ ಬಂದವನು. 2009ರಿಂದ ಬಸವೇಶ್ವರ, ಸಂಗೊಳ್ಳಿ ರಾಯಣ್ಣ ನಾಟಕ ಮಾಡಿದ್ದೇನೆ. ಹಳ್ಳಿ-ಹಳ್ಳಿಗೆ ಹೋಗಿ ಜಾಗೃತಿ, ನಾಟಕ ಮಾಡಿರುವೆ. ಅಲ್ಲದೇ ಚಲನಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾಗಿ ತಿಳಿಸಿದರು.
ರಾಜ್ಯದ ನಾಲ್ಕು ರಂಗಾಯಣಗಳ ಪೈಕಿ ಧಾರವಾಡ ಮಾದರಿ ರಂಗಾಯಣ ನಿರ್ಮಾಣಕ್ಕೆ ಶ್ರಮಿಸುವೆ ಎಂದರು. ಹಿರಿಯ ಸಾಹಿತಿಗಳು, ರಂಗ ಸಮಾಜದ ಸದಸ್ಯರ, ರಂಗಕರ್ಮಿಗಳ ಸಲಹೆ ಪಡೆಯುವೆ. ರಂಗಾಯಣದ ಬಗ್ಗೆ ಕನಸುಗಳಿವೆ. ಧಾರವಾಡ ರಂಗಾಯಣ ಎತ್ತರಕ್ಕೆ ಒಯ್ಯುವ ಮಹದಾಸೆ ಹೊಂದಿರುವುದಾಗಿ ಹೇಳಿದರು.
ಏಣಗಿ ನಟರಾಜ್ ನಮ್ಮ ತಾಲೂಕಿನವರು, ಅವರ ಕನಸು ನನಸು ಮಾಡುವೆ. ನಾನು ಬಿಜೆಪಿ ಕಾರ್ಯಕರ್ತ ಇರಬಹುದು, ಆದರೆ ನನ್ನ ಕಲೆ, ಪ್ರತಿಭೆಗೆ ಬೆಲೆ ನೀಡಿ ಸರ್ಕಾರ ನನಗೆ ಈ ಜವಾಬ್ದಾರಿ ನೀಡಿದೆ. ಪಕ್ಷದ ಸಿದ್ಧಾಂತ ಇಲ್ಲಿ ಇಲ್ಲ. ಕಲಾವಿದರ ಮೇಲೆ ಬೇಧ-ಭಾವ ಮಾಡಲ್ಲ ಎಂದರು.