ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪುತ್ರ ಸ್ಯಾಂಡಲ್ವುಡ್ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವಿವಾಹಕ್ಕೆ ರಾಮನಗರದ ಜನಪದ ಲೋಕದ ಬಳಿ ಭರ್ಜರಿ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ. ಜನಪದ ಲೋಕದ ಪಕ್ಕದಲ್ಲಿನ ಸೆಂಟ್ರಲ್ ಮುಸ್ಲಿಂ ಅಸೋಶಿಯೇಷನ್ ಹಾಗೂ ಉದ್ಯಮಿಯೊಬ್ಬರಿಗೆ ಸೇರಿದ ಜಾಗದಲ್ಲಿ ಅದ್ಧೂರಿ ಸೆಟ್ನಲ್ಲಿ ಏಪ್ರಿಲ್ 17ರಂದು ವಿವಾಹ ಕಾರ್ಯ ನೆರವೇರಿಸಲು ನಿಶ್ಚಯಿಸಲಾಗಿದೆ. ಹೀಗಾಗಿ ತಮ್ಮ ಮಗನ ಮದುವೆ ನಡೆಯುವ ಸ್ಥಳಕ್ಕೆ ಇಂದು ಹೆಚ್ಡಿಕೆ ದಂಪತಿ ಭೇಟಿ ನೀಡಿ ಪೂರ್ವ ಸಿದ್ಧತಾ ಕಾರ್ಯವನ್ನು ವೀಕ್ಷಣೆ ಮಾಡಿದರು.
ರಾಮನಗರ ತಾಲೂಕಿನ ಕೈಲಾಂಚ ಗ್ರಾಮದಲ್ಲಿ ನಡೆದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದ ಗೋಪುರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಪಾಲ್ಗೊಂಡಿದ್ರು. ಕಾರ್ಯಕ್ರಮದ ಬಳಿಕ ತಮ್ಮ ಮಗನ ಮದುವೆ ಕಾರ್ಯ ನಡೆಯುವ ಸ್ಥಳಕ್ಕೆ ಹೆಚ್ಡಿಕೆ ದಂಪತಿ ಭೇಟಿ ನೀಡಿದ್ರು.
ಕಾರ್ಯಕ್ರಮದ ಬಳಿಕ ಹೆಚ್ಡಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ದಂಪತಿ ನೇರವಾಗಿ ಜನಪದ ಲೋಕದ ಬಳಿ ಸಿಎಂಎ, ಉದ್ಯಮಿಯ ಹಾಗೂ ಲೇಔಟ್ಗೆ ಸೇರಿದ 80 ಎಕರೆಗೂ ಹೆಚ್ಚು ಜಾಗದಲ್ಲಿ ಮದುವೆಗೆ ಸಿದ್ಧತೆ ಕಾರ್ಯಗಳು ನಡೆಯುತ್ತಿರುವ ಜಾಗಕ್ಕೆ ಭೇಟಿ ನೀಡಿದರು. ಕುರುಚಲು ಕಾಡಿನಂತಿದ್ದ ಲೇಔಟ್, ಕೃಷಿ ಮಾಡದೇ ಬಂಜರು ಭೂಮಿಯಂತಾಗಿದ್ದ ಸೆಂಟ್ರಲ್ ಮುಸ್ಲಿಂ ಅಸೋಷಿಯೇಷನ್ಗೆ ಸೇರಿದ ಜಾಗ ಹಾಗೂ ಸರ್ಕಾರಿ ಜಾಗವನ್ನೆಲ್ಲ ಜೆಸಿಬಿ ಯಂತ್ರಗಳ ಸಹಾಯದಿಂದ ಸಮತಟ್ಟು ಮಾಡುತ್ತಿರುವ ಕಾರ್ಯವನ್ನು ವೀಕ್ಷಣೆ ನಡೆಸಿದ್ರು.
ಇದೇ ವೇಳೆ ಹೆಚ್ಡಿಕೆ ದಂಪತಿ ನಿಖಿಲ್-ರೇವತಿ ಮದುವೆಗೆ ಕಲ್ಯಾಣ ಮಂಟಪ ಎಲ್ಲಿ ನಿರ್ಮಾಣ ಮಾಡೋದು, ಯಾವ ಸ್ಥಳದಲ್ಲಿ ಅದ್ಧೂರಿ ಸೆಟ್ನ ಕಲ್ಯಾಣ ಮಂಟಪ ನಿರ್ಮಿಸಬಹುದು. ತಮ್ಮ ಶಾಸ್ತ್ರಗಳು ಹೇಳಿರುವ ವಾಸ್ತು ಪ್ರಕಾರದ ಜಾಗ ಯಾವ ಕಡೆಗಿದೆ ಎಂಬುದರ ಬಗ್ಗೆ ತಮ್ಮಲ್ಲೇ ಚರ್ಚೆ ನಡೆಸಿದರು. ನಿಖಿಲ್ ಮದುವೆ ಫಿಕ್ಸ್ ಆದಾಗಿನಿಂದ ಹೆಚ್ಡಿಕೆ ಮೂರನೇ ಬಾರಿಗೆ ಮದುವೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.