ಬೆಂಗಳೂರು: ರಾಜೀನಾಮೆ ವಾಪಸ್ ಪಡೆಯಬೇಡಿ ಎಂದು ಯಾರೂ ಕೂಡ ಒತ್ತಡ ಹಾಕಿಲ್ಲ. ಹೀಗಾಗಿ ನಾನು ರಾಜೀನಾಮೆ ವಾಪಸ್ ತೆಗೆದುಕೊಳ್ಳುತ್ತೀನೋ, ಇಲ್ಲವೋ ಎಲ್ಲವನ್ನು ಸಂದರ್ಭ ಬಂದಾಗ ಹೇಳುತ್ತೇನೆ ಎಂದು ಅತೃಪ್ತ ಶಾಸಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ನಾನು ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೀನಿ ಎಂದು ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ ಅದನ್ನು ತಿಳಿಸೋಣ ಎಂದು ಶನಿವಾರ ಬೆಂಬಲಿಗರ ಸಭೆ ಕರೆದಿದ್ದೆ. ಆದರೆ ನನಗೆ ಈ ಸಮಯದಲ್ಲಿ ಬೇಡ ಎಂದು ಸಭೆಯನ್ನು ರದ್ದು ಮಾಡಿದೆ ಎಂದರು.
ಸ್ವಲ್ಪವಾದರೂ ಮನಸ್ಸು ಬದಲಾವಣೆ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಕ್ಕೆ, ನಾಳೆ ಸ್ಪೀಕರ್ ಬಳಿ ಹೋದಾಗ ಎಲ್ಲವನ್ನು ಹೇಳುತ್ತೇನೆ. ರಾಜೀನಾಮೆ ವಾಪಸ್ ಪಡೆಯಬೇಡಿ ಎಂಬ ಯಾವ ಒತ್ತಡವೂ ನನಗೆ ಇಲ್ಲ. ಯಾವ ನಾಯಕರು ಕೂಡ ನನ್ನನ್ನು ಸಂಪರ್ಕ ಮಾಡಿಲ್ಲ. ಎಲ್ಲ ಪಕ್ಷದಲ್ಲಿ ಸ್ನೇಹಿತರಿದ್ದಾರೆ. ಹೀಗಾಗಿ ಅವರು ಬಂದು ಭೇಟಿ ಮಾಡುತ್ತಾರೆ. ಯಾರೂ ರಾಜೀನಾಮೆ ಬಗ್ಗೆ ಮಾತನಾಡಿಲ್ಲ ಎಂದು ಅವರು ತಿಳಿಸಿದರು.
ನಾನು ರಾಜೀನಾಮೆ ವಾಪಸ್ ತೆಗೆದುಕೊಳ್ಳುತ್ತೀನೋ, ಇಲ್ಲವೋ ಎಲ್ಲವನ್ನು ಸಂದರ್ಭ ಬಂದಾಗ ಹೇಳುತ್ತೇನೆ. ಸೌಮ್ಯ ರೆಡ್ಡಿ ಪಕ್ಷೇತರ ಅಭ್ಯರ್ಥಿಯಾಗಿದ್ದು, ಅವರೇ ಸ್ವತಃ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ಕುಟುಂಬದಲ್ಲಿ ರಾಜಕೀಯದ ಬಗ್ಗೆ ಯಾರಿಗೂ ಗೊತ್ತಿಲ್ಲ. ಹೀಗಾಗಿ ಇದರ ಬಗ್ಗೆ ಮಾತನಾಡುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.