– ಕರ್ನಾಟಕದ್ದು ಕಿಚಡಿ ಸರ್ಕಾರ
ಮಂಗಳೂರು: ಉರಿ, ಬಾಲಕೋಟ್ ಸೇರಿದಂತೆ ಭಾರತ ಗಡಿ ದಾಟಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಉರಿ ಮತ್ತು ಬಾಲಕೋಟ್ ಬಗ್ಗೆ ನಿಮಗೆಲ್ಲ ಗೊತ್ತಿದೆ. ಆದ್ರೆ ಮೂರನೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೇಳಲಾರೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಇಂದು ಮಂಗಳೂರಿನಲ್ಲಿ ಹೇಳಿದ್ದಾರೆ.
ಮಂಗಳೂರಿನ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಇಂದು ಭಾರತ ಸದೃಢವಾಗಿದ್ದು, ಎಲ್ಲ ವಿರೋಧಿಗಳಿಗೆ ತಕ್ಕ ಉತ್ತರವನ್ನು ನೀಡುತ್ತಿದೆ. ನಾವು ಯಾರ ತಂಟೆಗೂ ಹೋಗಲ್ಲ. ಒಂದು ವೇಳೆ ನಮ್ಮ ತಂಟೆಗೆ ಯಾರದ್ರೂ ಬಂದ್ರೆ ಸುಮ್ಮನೆ ಬಿಡಲ್ಲ ಎಂಬ ನಿಯಮ ನಮ್ಮಲ್ಲಿದೆ. ಈಗಾಗಲೇ ಅಂತವರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದೇವೆ ಎಂದು ಹೆಮ್ಮೆಯಿಂದ ತಿಳಿಸಿದರು.
ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ನೆರೆಯ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದೇವೆ. ನಮ್ಮ ಸೈನಿಕರು ಮತ್ತು ವಾಯು ಸೇನೆಯ ಪೈಲಟ್ ಗಳು ಧೈರ್ಯವಾಗಿ ಉಗ್ರರನ್ನು ಹೊಡೆದುರುಳಿಸುತ್ತಿದ್ದಾರೆ. ಅಲ್ಲಿ ಉಗ್ರರು ಸತ್ತರೆ, ಇಲ್ಲಿಯ ಕೆಲವರಿಗೆ ನೋವಾಗುತ್ತಿದೆ. ದಾಳಿ ನಡೆಸಿದ್ದಕ್ಕೆ ಸಾಕ್ಷಿ ಬೇಕೆಂದು ಕೇಳುತ್ತಿದ್ದಾರೆಂದು ವಿಪಕ್ಷ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಕರ್ನಾಟಕದಲ್ಲಿ ಕಿಚಡಿ ಸರ್ಕಾರವಿದೆ. ಚುನಾವಣೆಗೆ ಮೊದಲು ಸಾಲಮನ್ನಾ ಮಾಡ್ತೀವಿ ಎಂದು ಮತ ಪಡೆದುಕೊಂಡರು. ಇದೂವರೆಗೂ ಜನರಿಗೆ ಸಾಲಮನ್ನಾದ ಲಾಭ ದೊರೆತ್ತಿಲ್ಲ. ಹೇಳೋದೊಂದು ಮಾಡೋದೊಂದು ರೀತಿಯಲ್ಲಿ ಆಡಳಿತ ಆಗಬಾರದು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇಷ್ಟು ದಿನ ಇಸ್ಲಾಮಿಕ್ ರಾಷ್ಟ್ರಗಳ ಸಮ್ಮೇಳನಕ್ಕೆ ಭಾರತಕ್ಕೆ ಆಹ್ವಾನ ಇರಲಿಲ್ಲ. ಮೊದಲ ಬಾರಿಗೆ ಭಾರತವನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿತ್ತು. ಪಾಕಿಸ್ತಾನದ ವಿರೋಧ ಇದ್ದರೂ, ನಮ್ಮ ವಿದೇಶಾಂಗ ಸಚಿವರು ಸಮ್ಮೇಳನದಲ್ಲಿ ಭಾಗಿಯಾಗಿ, ಪಾಕ್ ವಿರುದ್ಧ ನಿರ್ಣಯ ತಗೊಳ್ಳುವಂತೆ ಮಾಡಿದ್ದು ಸಣ್ಣ ಸಾಧನೆಯಲ್ಲ. ಭಾರತಕ್ಕೆ ಮುಸ್ಲಿಂ ರಾಷ್ಟ್ರಗಳ ಬೆಂಬಲ ಪಡೆಯುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
https://www.youtube.com/watch?v=VRvHEbSEYCE
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv