ರಾಯಚೂರು: ಲಾಕ್ಡೌನ್ ಹಿನ್ನೆಲೆ ಮುಂಬೈನಲ್ಲೆ ಸಿಲುಕಿರುವ ಕನ್ನಡಿಗರು ನಿತ್ಯ ಪರದಾಡುತ್ತಿದ್ದಾರೆ. ಊಟಕ್ಕೂ ವ್ಯವಸ್ಥೆಯಿಲ್ಲದ ಬಡ ಕೂಲಿ ಕಾರ್ಮಿಕರ ಗೋಳು ಕೇಳುವವರು ಇಲ್ಲದಂತಾಗಿದೆ. ರಾಯಚೂರಿನ ದೇವದುರ್ಗ ತಾಲೂಕಿನ ಸುಮಾರು 40ಕ್ಕೂ ಹೆಚ್ಚು ಜನ ಕೂಲಿಕಾರರು ಮುಂಬೈನಲ್ಲೆ ಉಳಿದಿದ್ದಾರೆ.
ಮುಂಬೈನಲ್ಲಿ ಊಟ, ಪಡಿತರ ನೀಡದ ಸ್ಥಳೀಯ ಆಡಳಿತ, ಊಟ ಕೇಳಿದರೆ ವಾಪಸ್ ನಿಮ್ಮ ರಾಜ್ಯಕ್ಕೆ ಹೊರಟು ಹೋಗಿ ಎನ್ನುತ್ತಿದೆಯಂತೆ. ಹೀಗಾಗಿ ಕೆಲಸವೂ ಇಲ್ಲದೆ ಊಟವೂ ಇಲ್ಲದೆ ಕೂಲಿಕಾರ್ಮಿಕರು ಪರದಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಕೆಲಸಕ್ಕೆ ಗುಳೆ ಹೋಗಿದ್ದ ವಿವಿಧ ಗ್ರಾಮಗಳ ಜನ ಅಂತಂತ್ರರಾಗಿದ್ದಾರೆ. ಮರಾಠಿ ಭಾಷಿಕ ಕೂಲಿಕಾರರಿಗೆ ಮಾತ್ರ ಮುಂಬೈನಲ್ಲಿ ಪಡಿತರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗಾಗಿ ರಾಜ್ಯಕ್ಕೆ ಮರಳಿ ಬರಲು ವ್ಯವಸ್ಥೆ ಮಾಡುವಂತೆ ಕೂಲಿಕಾರ್ಮಿಕರ ಮನವಿ ಮಾಡಿದ್ದಾರೆ. ದೇವದುರ್ಗಕ್ಕೆ ವಾಪಸ್ ಬರಲು ಅನುಕೂಲ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಆದರೆ ಇದುವರೆಗೂ ರಾಯಚೂರು ಜಿಲ್ಲಾಡಳಿತ ಮುಂಬೈನಲ್ಲಿ ಉಳಿದಿರುವ ಕೂಲಿ ಕಾರ್ಮಿಕರನ್ನು ಸಂಪರ್ಕಿಸುವ ಕೆಲಸಕ್ಕೆ ಮುಂದಾಗಿಲ್ಲ.