ರಾಯಚೂರು: ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬಳಿಕ ಮದ್ಯದ ಅಂಗಡಿ ಮುಂದೆ ಮದ್ಯಪ್ರಿಯರು ಕ್ಯೂ ನಿಂತಿದ್ದರು. ಈಗ ಗುಟ್ಕಾ, ಸಿಗರೇಟ್ ಅಂಗಡಿ ಮುಂದೆ ದೊಡ್ಡ ಕ್ಯೂ ಕಾಣಿಸುತ್ತಿದೆ.
ಪಾನ್ ಬೀಡ ವ್ಯಾಪಾರಕ್ಕೆ ಅವಕಾಶ ಸಿಕ್ಕ ಹಿನ್ನೆಲೆ ಸಗಟು ಅಂಗಡಿಗಳ ಮುಂದೆ ವ್ಯಾಪಾರ ಜೋರಾಗಿದೆ. ರಾಯಚೂರಿನ ಮಾನ್ವಿಯಲ್ಲಿ ನೂರಾರು ಜನರಿಂದ ಭರ್ಜರಿ ವ್ಯಾಪಾರ ನಡೆದಿದೆ. ಮಾನ್ವಿಯ ಸಗಟು ವ್ಯಾಪಾರ ಅಂಗಡಿಗಳ ಮುಂದೆ ಜನಜಂಗುಳಿ ಸೇರಿದ್ದು ಸಾಮಾಜಿಕ ಅಂತರ, ಮಾಸ್ಕ್ಗಳನ್ನು ಮರೆತು ಗುಟ್ಕಾ ಪ್ಯಾಕೆಟ್ ಗಳನ್ನು ಜನ ಕೊಳ್ಳುತ್ತಿದ್ದಾರೆ.
ಕ್ಯೂನಲ್ಲಿ ನಿಂತ ಪಾನ್ ಬೀಡ ಅಂಗಡಿ, ಕಿರಾಣಿ ಅಂಗಡಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕೊರೊನಾ ಭೀತಿಯನ್ನೇ ಮರೆತಿದ್ದಾರೆ. ಗ್ರಾಮೀಣ ಭಾಗದಿಂದಲೂ ಬಂದ ನೂರಾರು ಜನ ಗುಟ್ಕಾ ಪ್ಯಾಕೆಟ್ಗಳನ್ನು ತೆಗೆದುಕೊಂಡು ಹೋದರು. ಮೊದಮೊದಲಿಗೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಮೇ 4 ರಂದು ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಈ ಬೆನ್ನಲ್ಲೇ ಮದ್ಯದಂಗಡಿಗಳು ಓಪನ್ ಆಗಿದ್ದವು. ಇದೇ ಸಂದರ್ಭದಲ್ಲಿ 42 ದಿನಗಳ ಕಾಲ ಮದ್ಯವಿಲ್ಲದೆ ಕಂಗಾಲಾಗಿದ್ದ ಎಣ್ಣೆಪ್ರಿಯರು ಬಿಸಿಲು ಎನ್ನದೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಿದ್ದರು. ಆದರೆ ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.