ಧಾರವಾಡ: ಕೆಡಿಪಿ ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೈತ್ರಿ ಸರ್ಕಾರದ ಬಗ್ಗೆ ಆಡಿದ ಮಾತಿಗೆ ಸಚಿವ ಆರ್.ವಿ. ದೇಶಪಾಂಡೆ ಸಿಡಿಮಿಡಿಗೊಂಡಿದ್ದು, ಶೆಟ್ಟರ್ ಮಾತಿನ ಕೋಪವನ್ನು ಅಧಿಕಾರಿಗಳ ಮೇಲೆ ತೀರಿಸಿಕೊಂಡಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯ್ತಿ ಸಭಾ ಭವನದಲ್ಲಿ ಇಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರ್.ವಿ. ದೇಶಪಾಂಡೆ 4ನೇ ತ್ರೈಮಾಸಿಕ ಕೆಡಿಪಿ ಸಭೆ ಏರ್ಪಡಿಸಿದ್ದರು. ಈ ವೇಳೆ ಸಭೆಯ ಮಧ್ಯೆ ಜಗದೀಶ್ ಶೆಟ್ಟರ್ `ಯಾಕಾದ್ರೂ ಇರಬೇಕ್ರಿ ಸರ್ಕಾರ’ ಎನ್ನುವ ಮಾತೇ ಸಚಿವರ ಸಿಡಿಮಿಡಿಗೆ ಕಾರಣವಾಯ್ತು.
ಹುಬ್ಬಳ್ಳಿಯಲ್ಲಿ ಜನರು ಓಡಾಡೋದಕ್ಕೆ ಆಗದಷ್ಟು ಅನೇಕ ರಸ್ತೆಗಳು ಅತಿಕ್ರಮಣ ಆಗಿವೆ. ಈಗ ಸಣ್ಣ ಸಣ್ಣ ಮಕ್ಕಳು ಕೂಡ ಅತಿಕ್ರಮಣದ ಬಗ್ಗೆ ಮಾತನಾಡುವಂತಾಗಿದೆ, ನಾನು ದಾಖಲೆಗಳನ್ನು ಕೂಡ ಕೊಟ್ಟಿದ್ದೇನೆ. ಆದರೂ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಸ್ತೆಗಳ ಅತಿಕ್ರಮಣ ತೆರವು ಮಾಡುತ್ತಿಲ್ಲ ಎಂದು ಶೆಟ್ಟರ್ ಆರೋಪಿಸಿದರು.
ಅಲ್ಲದೆ `ಅತಿಕ್ರಮಣ ತೆರವು ಮಾಡುವ ಗಟ್ಸ್ ಇಲ್ಲದೇ ಹೋದರೆ ಯಾಕಾದ್ರೂ ಇರಬೇಕ್ರಿ ಈ ಸರ್ಕಾರ’ ಎಂದು ದೇಶಪಾಂಡೆ ಅವರ ಎದುರೇ ಮೈತ್ರಿ ಸರ್ಕಾರಕ್ಕೆ ಛೀಮಾರಿ ಹಾಕಿದರು. ಇದಕ್ಕೆ ಸಿಡಿಮಿಡಿಗೊಂಡ ಸಚಿವ ದೇಶಪಾಂಡೆ ಅವರು ಸಭೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಶೆಟ್ಟರ್ ಪ್ರಸ್ತಾಪ ಮಾಡಿರುವ ರಸ್ತೆಗಳ ಅತಿಕ್ರಮಣ ತೆರವು ಮಾಡಲು ಅಧಿಕಾರಿಗಳಿಗೆ 24 ಗಂಟೆಗಳ ಗಡುವು ನೀಡಿ ಎಚ್ಚರಿಕೆ ನೀಡಿದರು.