ಚಾಮರಾಜನಗರ: ಪೋಲಿಸರು ಒಂದು ದಿನ ರಜೆ ಸಿಕ್ಕಿದರೆ ಸಾಕು ಫ್ಯಾಮಿಲಿ ಜೊತೆ ಕಾಲ ಕಳೆಯೋಣ, ರಿಲ್ಯಾಕ್ಸ್ ಆಗೋಣ ಎಂದು ಕಾದು ಕುಳಿತಿರುತ್ತಾರೆ. ಆದರೆ ಚಾಮರಾಜನಗರದ ಪೊಲೀಸ್ ಪೇದೆಯೊಬ್ಬರು ತಮಗೆ ಸಿಗುವ ರಜೆ ಸಮಯದಲ್ಲೂ ಕೂಡ ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಉಚಿತ ಟ್ಯೂಷನ್, ನಿರುದ್ಯೋಗಿ ಯುವಕರಿಗೆ ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.
ಚಾಮರಾಜನಗರ ಎಸ್ಪಿ ಕಚೇರಿಯಲ್ಲಿ ಮೀಸಲು ಪೋಲಿಸ್ ಪಡೆಯ ಪೇದೆ ಆಗಿರೋ ಮಧುಸೂದನ್ ತಮ್ಮ ನಿಸ್ವಾರ್ಥ ಕೆಲಸದ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ. ಇವರು ಹರದನಹಳ್ಳಿಯವರಾಗಿದ್ದು, ತಮ್ಮ ಗ್ರಾಮದ ಮಕ್ಕಳಿಗೆ ನಿತ್ಯ ಬೆಳಗ್ಗೆ ಉಚಿತ ಟ್ಯೂಷನ್ ನೀಡುತ್ತಾರೆ.
ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ವಿವೇಕಾನಂದ ಪಾಠ ಶಾಲೆ ಹೆಸರಿನಲ್ಲಿ ಮಕ್ಕಳಿಗೆ ಉಚಿತ ಟ್ಯೂಷನ್ ತೆಗೆದುಕೊಳ್ಳುತ್ತಾರೆ. ಜೊತೆಗೆ ತಮ್ಮ ಊರಿನ ಯುವಕರು ಓದಲಿ, ಒಳ್ಳೆ ಕೆಲಸಕ್ಕೆ ಸೇರಲಿ ಎಂದು ಚಿಕ್ಕ ಗ್ರಂಥಾಲಯ ಕೂಡ ತೆರೆದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಕೋಚಿಂಗ್ ನೀಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಸ್ವಚ್ಛ ಭಾರತ್ ಅಭಿಯಾನವನ್ನು ತಮ್ಮೂರಲ್ಲಿ ಮಧುಸೂಧನ್ ನಡೆಸಿದ್ದಾರೆ. ಯುವಕರನ್ನು ಒಗ್ಗೂಡಿಸಿ ತಮ್ಮ ರಜೆ ಸಮಯವನ್ನು ಊರ ಸ್ವಚ್ಛತೆಗಾಗಿ ಮೀಸಲಿಟ್ಟಿದ್ದಾರೆ. ಕಲ್ಯಾಣಿ, ದೇಗುಲ, ಒಳಚರಂಡಿಯ ಸ್ವಚ್ಛ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ಮೂಲಕ ಮೀಸಲು ಪೊಲೀಸ್ ಪಡೆಯ ಪೇದೆ ಮಧುಸೂಧನ್ ಗ್ರಾಮೋದ್ಧಾರಕ್ಕೆ ಪಣ ತೊಟ್ಟಿದ್ದಾರೆ. ಮಧುಸೂದನ್ ಅವರ ಈ ಸಾಮಜ ಸೇವೆ, ತಮ್ಮ ಊರಿನ ಮೇಲೆ ಅವರಿಟ್ಟಿರುವ ಪ್ರೀತಿ ಎಲ್ಲರ ಮನಗೆದ್ದಿದ್ದು, ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.