ಮೈಸೂರು: ಬಿಜೆಪಿ (BJP) ನಂದಿನಿ ಮುಗಿಸಲು ಗುಜರಾತಿಯ (Gujarat) ಅಮುಲ್ ತರಲು ಹೊರಟಿದ್ದಾರೆ. ಆದರೆ ನಂದಿನಿ ಸಂಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಬಂದರೆ ಗಟ್ಟಿಗೊಳ್ಳಿಸುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಭರವಸೆ ನೀಡಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಂದಿನಿಯ ಬ್ರಾಂಡ್ ಅನ್ನು ಒಡೆದು ಹಾಕುವ ಸಂಚು ನಡೆಯುತ್ತಿದೆ. ಮೊದಲು 90 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಈಗ ಅದು 70 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಉದ್ದೇಶ ಪೂರ್ವಕವಾಗಿ ಹಾಲು ಉತ್ಪಾದನೆ ಕಡಿಮೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಆಗುತ್ತಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ರಾಜ್ಯಕ್ಕೆ ಬರುವ ಹಣ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಇಲ್ಲಿ ಪದೇ ಪದೇ ಸಿಎಂಗಳು ಬದಲಾದರು. ದುರ್ಬಲ ಸಿಎಂ ಈ ರಾಜ್ಯಕ್ಕೆ ಸಿಕ್ಕಿರುವುದರ ಪರಿಣಾಮವಾಗಿದೆ. ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆ ಆಗಲಿಲ್ಲ. ಈ ಸರ್ಕಾರ 40% ಹೆಸರಿನಲ್ಲಿ ಈ ರಾಜ್ಯವನ್ನು ಲೂಟಿ ಮಾಡಿದೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರೂ ಪ್ರಯೋಜನ ಆಗಲಿಲ್ಲ. ಎಲ್ಲಾ ಸರ್ಕಾರಿ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯಿತು. ಕೋವಿಡ್ ರೋಗಿಗಳನ್ನು ಬಿಡಲಿಲ್ಲ. ಮಕ್ಕಳ ಮೊಟ್ಟೆಯಲ್ಲೂ ಬಿಡಲಿಲ್ಲ. ಎಲ್ಲದರಲ್ಲೂ ಭ್ರಷ್ಟಾಚಾರ. ಒಂದುವರೆ ಲಕ್ಷ ಕೋಟಿ ರೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಲಕ್ಷಗಟ್ಟಲೆ ಹುದ್ದೆಗಳು ಸರ್ಕಾರದಲ್ಲಿ ಖಾಲಿ ಇವೆ. ಆದರೂ ನೇಮಕಾತಿ ನಡೆಯಲಿಲ್ಲ. ಈ ಸರ್ಕಾರ ಕೊಟ್ಟ ಎಲ್ಲಾ ಭರವಸೆ ಹುಸಿ ಮಾಡಿದೆ. ರಾಜ್ಯಕ್ಕೆ ಕೊಟ್ಟ ಭರವಸೆ ಯಾಕೆ ಈಡೇರಿಸಲಿಲ್ಲ ಅಂತಾ ಕಾಂಗ್ರೆಸ್ ಕೇಳುತ್ತಿದೆ. ಮೀಸಲಾತಿ ಹೆಚ್ಚಳದಲ್ಲೂ ಮೋಸ, ವಂಚನೆಯನ್ನು ಸರ್ಕಾರ ಮಾಡಿದೆ ಎಂದು ಗುಡುಗಿದರು.
ಕಾಂಗ್ರೆಸ್ ನಾಯಕರು ತಮ್ಮ ಸಮಾಧಿ ತೊಡಲು ತಯಾರಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳುತ್ತಾರೆ. ಇದು ಚುನಾವಣಾ ವಿಷಯ ಆಗೋಕೆ ಸಾಧ್ಯನಾ? ಈ ದೇಶದಲ್ಲಿ ಒಬ್ಬ ಪ್ರಧಾನಿ ಬಗ್ಗೆ ಇಷ್ಟು ಕೆಟ್ಟದಾಗಿ ಯೋಚಿಸುವ ಜನ ಇಲ್ಲ. ಪ್ರಧಾನಿಗಳ ಹೇಳಿಕೆಯಲ್ಲಿ ಅರ್ಥವಿಲ್ಲ. ಈ ಚುನಾವಣೆ ಮೋದಿ ಅವರು ಬಗ್ಗೆ ಅಲ್ಲ. ಇದು ಕರ್ನಾಟಕದ ಭವಿಷ್ಯದ ಚುನಾವಣೆ. ಇದು ಕರ್ನಾಟಕದ ಸ್ವಾಭಿಮಾನ, ದಿನನಿತ್ಯದ ಜೀವನ ಆಧಾರಿಸಿದ ಚುನಾವಣೆ ಇದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಯ ತದ್ರೂಪಿ ಪಕ್ಷೇತರವಾಗಿ ಸ್ಪರ್ಧೆ – ಮತದಾರರಲ್ಲಿ ಗೊಂದಲ ಸೃಷ್ಟಿ ಯತ್ನದ ಆರೋಪ
ಕರ್ನಾಟಕದ ಈ ಸುಂದರ ಜಾಗ ನೋಡಿ ನನಗೆ ಬಹಳ ಖುಷಿಯಾಯಿತು. ಇದು ಸಂಗಮ ಸ್ಥಳ. ಕಾವೇರಿ, ಕಬಿನಿ ನದಿಯ ಸ್ಥಳ. ಇದು ಬಹಳ ಪವಿತ್ರವಾದ ಸ್ಥಳವೆಂದು ಎಲ್ಲರೂ ಹೇಳುತ್ತಾರೆ. ನಾವು ಬಹಳ ಒಳ್ಳೆಯವರು ಬೇರೆಯವರು ಕೆಟ್ಟವರು ಎಂದು ಹೇಳುತ್ತಾರೆ. ಆದರೆ, ಯಾರು ಒಳ್ಳೆಯವರು ಕೆಟ್ಟವರು ಎಂದು ಜನ ತೀರ್ಮಾನ ಮಾಡುತ್ತಾರೆ. ಜನ ಸರಿಯಾದ ದೃಷ್ಟಿಯಿಂದ ಯೋಚನೆ ಮಾಡಿ ಮತ ಹಾಕಬೇಕು. ಕರ್ನಾಟಕಕ್ಕೆ ಬಹಳ ದೊಡ್ಡ ಸಂಸ್ಕೃತಿ ಇದೆ ಎಂದರು.
ಸೇವೆ ಸರ್ಕಾರದ ಧರ್ಮ. ಪ್ರಾಮಾಣಿಕತೆ ಸರ್ಕಾರದ ತತ್ವ ಆಗಿರಬೇಕು. ಆದರೆ, ಕರ್ನಾಟಕ ಸರ್ಕಾರದ ಸ್ಥಿತಿ ಏನಾಗಿದೆ. ಬಿಜೆಪಿ ತಪ್ಪು ದಾರಿಯಿಂದ ಹಣ ಬಳಸಿ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ಬೀಳಿಸಿತು. ಸರ್ಕಾರ ಆರಂಭದಲ್ಲೇ ಜನರಿಗೆ ವಂಚನೆ ಮಾಡಿತು. ದುರಾಸೆ ಅಮಿಷದಿಂದ ಈ ಸರಕಾರ ರಚನೆ ಆಯ್ತು ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್ನಲ್ಲೂ ಸ್ಟಾರ್ ಕ್ಯಾಂಪೇನರ್ ಇದ್ದಾರೆ: ಹೆಚ್ಡಿ ದೇವೇಗೌಡ