ಹಾವೇರಿ: ನಿಂತಲ್ಲಿಯೇ ಖಾಸಗಿ ಬಸ್ ಧಗಧಗನೆ ಹೊತ್ತಿ ಉರಿದು ಸುಟ್ಟು ಭಸ್ಮವಾದ ಘಟನೆ ಹಾವೇರಿ ನಗರದ ಮುರುಘರಾಜೇಂದ್ರ ಮಠದ ಬಳಿ ನಡೆದಿದೆ.
ಖಾಸಗಿ ಬಸ್ ಇಂದು ಮುಂಜಾನೆ ಮಂಗಳೂರಿನಿಂದ ಸುಮಾರು 7 ಗಂಟೆಗೆ ಬಂದು ನಿಂತಿತ್ತು. ಆದರೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಬಸ್ ಹೊತ್ತಿಕೊಂಡು ಧಗಧಗನೇ ಉರಿದಿದೆ. ಇದನ್ನೂ ನೋಡಿ ಸ್ಥಳೀಯರು ಗಾಬರಿಗೊಂಡು ತಕ್ಷಣ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಸದ್ಯ ಬಸ್ಸಿನ ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್ ಇತ್ತು. ಇದರಿಂದ ಬೆಂಕಿ ನಂದಿಸುವರೆಗೂ ಜನರು ಆತಂಕಗೊಂಡಿದ್ದರು. ಬಸ್ಸಿನಲ್ಲಿ ನಿರ್ವಾಹಕ ರಾಜು ಮಲಗಿದ್ದರು. ಆದರೆ ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ನಂತರ ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ಇಂಜಿನ್ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.