ನವದೆಹಲಿ: ಈ ಬಾರಿಯ ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದಕ್ಕೆ ನಾನು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಆಯ್ಕೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಐತಿಹಾಸಿಕ ದಸರಾ ಉದ್ಘಾಟನೆಗೆ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆಯ್ಕೆ ಮಾಡುವುದು ವಾಡಿಕೆ. ಆದರೆ ಈ ವಾಡಿಕೆ ಕೈಬಿಟ್ಟು ರಾಜಕೀಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ ಗಣ್ಯರನ್ನು ಮೊದಲ ಬಾರಿಗೆ ಅಯ್ಕೆ ಮಾಡಿರುವುದು ಖುಷಿ ತಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯಗಿಲ್ಲ : ಮಹಾಂತೇಶ್ ಕವಟಗಿಮಠ
ಮೈಸೂರು ಜೊತೆಗೆ ಎಸ್.ಎಂ ಕೃಷ್ಣ ಅವರಿಗೆ ಭಾವನಾತ್ಮಕ ಸಂಬಂಧ ಇದೆ. 20 ವರ್ಷಗಳ ಹಿಂದೆ ಮೈಸೂರು ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದ್ದರು. ನಾಲ್ಕು ಪಥದ ರಸ್ತೆಯನ್ನು ಆ ಕಾಲದಲ್ಲಿ ಮಾಡಿಕೊಟ್ಟರು. ಇದರಿಂದ ಮೈಸೂರು ಅಭಿವೃದ್ಧಿ ಕಂಡಿತ್ತು. ಅಲ್ಲದೇ ರಿಂಗ್ ರೋಡ್ ಕೂಡಾ ಎಸ್ಎಂ ಕೃಷ್ಣ ಅವರ ಕಾಲದಲ್ಲಿ ಆಯ್ತು, ಮೈಸೂರಿಗೆ ಅವರ ಕೊಡುಗೆ ಅಪಾರ ಎಂದು ಎಸ್.ಎಂ ಕೃಷ್ಣ ಅವರನ್ನು ಶ್ಲಾಘಿಸಿದರು. ಇದನ್ನೂ ಓದಿ: ದಸರಾ ಉದ್ಘಾಟನೆಯನ್ನು ರಾಜಕೀಕರಣಗೊಳಿಸುವುದು ಕೆಟ್ಟ ಸಂಪ್ರದಾಯ – ಆಪ್ ವಿರೋಧ
ಎಸ್.ಎಂ ಕೃಷ್ಣ ಆಯ್ಕೆಯನ್ನು ನಾವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬಿಟ್ಟು, ಪಕ್ಷಗಳ ಚೌಕಟ್ಟು ಹೊರತಾಗಿ ನೋಡಬೇಕು. ಮಾಜಿ ಸಿಎಂ, ಕೇಂದ್ರ ಸಚಿವರು, ಮಾಜಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಪ್ರತಾಪ್ ಸಿಂಹ ಹೇಳಿದರು.