ಲಕ್ನೋ: ವಾರದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಉತ್ತರ ಪ್ರದೇಶದ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ ರಸ್ತೆ ಮಳೆಯಿಂದಾಗಿ ಗುಂಡಿ ಬಿದ್ದಿದೆ.
ಸುಮಾರು 296 ಕಿ.ಮೀ. ಉದ್ದದ ರಸ್ತೆ ಇದಾಗಿದೆ. ರಸ್ತೆ ಅಭಿವೃದ್ಧಿಪಡಿಸಿ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ಕಳೆದ ವಾರವಷ್ಟೇ ಮೋದಿ ಅವರು ರಸ್ತೆ ಉದ್ಘಾಟಿಸಿದ್ದರು. ಆದರೆ ಮಳೆಯಿಂದಾಗಿ ರಸ್ತೆ ಗುಂಡಿ ಬಿದ್ದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಆ.7ರಿಂದ ಹಾರಲಿದೆ ಆಕಾಶ್ ಏರ್ – ಬೆಂಗಳೂರು ಟು ಕೊಚ್ಚಿಗೆ ಹೋಗಬಹುದು
ಮಳೆಗೆ ರಸ್ತೆ ಒಂದೂವರೆ ಅಡಿ ಆಳದಷ್ಟು ಗುಂಡಿ ಬಿದ್ದಿದೆ. ಇದರ ವೀಡಿಯೋವನ್ನು ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದು ಬಿಜೆಪಿಯ ಅರೆಮನಸ್ಸಿನ ಅಭಿವೃದ್ಧಿಯ ಗುಣಮಟ್ಟದ ಮಾದರಿಯಾಗಿದೆ. ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇಯನ್ನು ‘ದೊಡ್ಡವರು’ (ಪ್ರಧಾನಿ ಮೋದಿಯ ಮೇಲಿನ ಪರೋಕ್ಷ ದಾಳಿ) ಉದ್ಘಾಟಿಸಿದರು. ಇದಾದ ಒಂದು ವಾರದಲ್ಲೇ ಭ್ರಷ್ಟಾಚಾರದ ದೊಡ್ಡ ಗುಂಡಿಗಳು ಕಾಣಿಸಿಕೊಂಡಿವೆ. ಅದರ ಮೇಲೆ ರನ್ ವೇ ನಿರ್ಮಿಸದಿರುವುದು ಒಳ್ಳೆಯದಾಯಿತು’ ಎಂದು ಅಖಿಲೇಶ್ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಆಗಸ್ಟ್ 13 ರಿಂದ 15ರವರೆಗೆ ನಿಮ್ಮ ಮನೆಮುಂದೆ ತ್ರಿವರ್ಣ ಧ್ವಜವನ್ನು ಹಾರಿಸಿ: ಮೋದಿ ಕರೆ
ये है भाजपा के आधे-अधूरे विकास की गुणवत्ता का नमूना… उधर बुंदेलखंड एक्सप्रेस-वे का बड़े लोगों ने उद्घाटन किया ही था कि इधर एक हफ़्ते में ही इस पर भ्रष्टाचार के बड़े-बड़े गड्ढे निकल आए।
अच्छा हुआ इस पर रनवे नहीं बना। pic.twitter.com/Dcl22VT8zv
— Akhilesh Yadav (@yadavakhilesh) July 21, 2022
ಈ ಕುರಿತು ಉತ್ತರ ಪ್ರದೇಶ ಎಕ್ಸ್ಪ್ರೆಸ್ವೇಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ (ಯುಪಿಇಐಡಿಎ) ಸಾರ್ವಜನಿಕ ಸಂಪರ್ಕಾಧಿಕಾರಿ ದುರ್ಗೇಶ್ ಉಪಾಧ್ಯಾಯ ಮಾತನಾಡಿ, ಜಲಾವೃತಗೊಂಡಿದ್ದರಿಂದ ರಸ್ತೆಯ ಒಂದು ಭಾಗ ಗುಂಡಿ ಬಿದ್ದಿದೆ. ತಂಡವು ಅದನ್ನು ಸರಿಪಡಿಸಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ದುರಸ್ತಿ ವೇಳೆ ಯಾರೋ ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
2020ರ ಫೆಬ್ರವರಿ 29 ರಂದು ಪ್ರಧಾನಿ ಮೋದಿ ಅವರು ಎಕ್ಸ್ಪ್ರೆಸ್ವೇಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಚೆಗೆ ರಸ್ತೆಯನ್ನು ಉದ್ಘಾಟಿಸಿದ್ದರು. ಸುಮಾರು 28 ತಿಂಗಳಲ್ಲಿ ಎಕ್ಸ್ಪ್ರೆಸ್ವೇ ನಿರ್ಮಿಸಲಾಗಿದೆ. ಎಕ್ಸ್ಪ್ರೆಸ್ವೇ ಉತ್ತರ ಪ್ರದೇಶದ ಚಿತ್ರಕೂಟ್, ಬಂದಾ, ಮಹೋಬಾ, ಹಮೀರ್ಪುರ್, ಜಲೌನ್, ಔರೈಯಾ ಮತ್ತು ಇಟಾವಾ (7) ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಸುಮಾರು 14,850 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.