ಚಿಕ್ಕಬಳ್ಳಾಪುರ: ಪೊಲೀಸರ ಹೆದ್ದಾರಿ ಗಸ್ತು ವಾಹನ ಇನ್ನೊವಾ ಕ್ರಿಸ್ಟಾ ಕಾರಿಗೆ ಟಾಟಾ ಸಫಾರಿ ಡಿಕ್ಕಿ ಹೊಡೆದ ಪರಿಣಾಮ ಕ್ರಿಸ್ಟಾ ಕಾರು ಪಲ್ಟಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಸಾಯಿಬಾಬಾ ದೇಗುಲದ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ ಪೊಲೀಸರ ಕಾರಿಗೆ ಅತಿ ವೇಗವಾಗಿ ಬರುತ್ತಿದ್ದ ಟಾಟಾ ಸಫಾರಿ ಕ್ಯಾಬಿನ್ ಇರುವ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಪೊಲೀಸರ ಕಾರು ಅಡ್ಡಲಾಗಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಚಾಲಕ ರಾಮಕೃಷ್ಣ ಹಾಗೂ ಪೊಲೀಸ್ ಮುಖ್ಯ ಪೇದೆ ನಾರಾಯಣರಾವ್ ಸಣ್ಣ ಪ್ರಮಾಣದ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ನೀಚ ಕೃತ್ಯ ಮಾಡುವವರಿಗೆ ಪೊಲೀಸರು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ: ಅರಗ ಜ್ಞಾನೇಂದ್ರ
ಘಟನೆ ನಂತರ ಟಾಟಾ ಸಫಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಸೇರಿ ವಾಹನದಲ್ಲಿದ್ದವರು ಎಸ್ಕೇಪ್ ಆಗಿದ್ದಾರೆ. ವಿಜಯಪುರ ಪೊಲೀಸ್ ಠಾಣೆಗೆ ಸೇರಿದ ಹೆದ್ದಾರಿ ಗಸ್ತು ವಾಹನ ಇದಾಗಿದ್ದು, ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಸಿಪಿಐ ಶ್ರೀನಿವಾಸ್ ಭೇಟಿ ನೀಡಿ ಗಾಯಾಳುಗಳ ಆರೈಕೆ ಮಾಡಿ, ವಾಹನಗಳನ್ನು ಪೊಲೀಸ್ ಠಾಣೆಯತ್ತ ಕೊಂಡೊಯ್ದಿದ್ದಾರೆ.