ಬೆಂಗಳೂರು: ಶೂಟಿಂಗ್ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡು ತಾಯಿ ಮತ್ತು ಮಗು ಇಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ರಣಂ’ ಸಿನಿಮಾದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
‘ರಣಂ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅವಘಡ ಸಂಭವಿಸಿತ್ತು. ಈ ಸಂಬಂಧ ಸ್ಟಂಟ್ ಮಾಸ್ಟರ್ ಅನ್ನು ಪೊಲೀಸರು ಬಂಧಿಸಿದ್ದರು. ಆಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ತಲೆಮರೆಸಿಕೊಂಡಿದ್ದರು. ಇಂದು ಬಾಗಲೂರು ಪೊಲೀಸರು ಶ್ರೀನಿವಾಸ್ ಅವರನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ’ ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಚಿತ್ರೀಕರಣ ನೋಡಲು ಬಂದಿದ್ದ ಆಯಿಷಾ ಖಾನ್ (5), ತಾಯಿ ಸುಯೇರಾ ಬಾನು ಮೃತಪಟ್ಟಿದ್ದರು. ನಗರದ ಬಾಗಲೂರು ಬಳಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆಗ ರಣಂ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಭಾಗವಾಗಿ ಕಾರನ್ನು ಬ್ಲಾಸ್ಟ್ ಮಾಡುವ ದೃಶ್ಯ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.