ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕಳೆದ 5 ದಿನಗಳಿಂದ ಕಾಡ್ಗಿಚ್ಚು ಸಂಭಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟರಾದ ದರ್ಶನ್ , ಪುನೀತ್ ಮನವಿಯ ಬೆನ್ನಲ್ಲೇ ಇದೀಗ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಕೂಡ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಯದುವೀರ್, ದಯವಿಟ್ಟು ಈ ಬಗ್ಗೆ ಸುದ್ದಿ ಹರಡಿ ನಮ್ಮ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡೋಣ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.
ಮನವಿಯೇನು..?
ಸ್ನೇಹಿತರೇ, ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿನ ಸುದ್ದಿ ತಿಳಿಯಲು ಬಹಳ ನೋವಾಗಿದೆ. ಅಂದಾಜು ಸುಮಾರು 20,000 ಎಕರೆ ಅರಣ್ಯಪ್ರದೇಶದ ಪ್ರಾಣಿಸಂಕುಲ ಹಾಗು ಸಸ್ಯಸಂಕುಲಕ್ಕೆ ಅಪಾರ ಹಾನಿ ಉಂಟಾಗಿದೆ. ನಮ್ಮ ಪರಿಸರ ಪರಂಪರೆಗೆ ಸಂಭವಿಸಿರುವ ಈ ನಷ್ಟವು ಬಹಳ ದುಃಖಕರ ಸಂಗತಿಯಾಗಿದೆ. ಇದನ್ನೂ ಓದಿ: ದರ್ಶನ್ ನಂತ್ರ ಪುನೀತ್ ರಾಜ್ಕುಮಾರ್ ಅಭಿಮಾನಿಗಳಲ್ಲಿ ಮನವಿ
ಅರಣ್ಯ ಇಲಾಖೆಯವರಿಗೆ ಸ್ವಯಂಸೇವಕರು ಬೇಕಾಗಿದ್ದಾರೆ ಹಾಗು ಸಾರ್ವಜನಿಕರಿಂದ ಸಹಾಯ ಕೋರಿದ್ದಾರೆ. ಬಂಡೀಪುರ ಪ್ರವೇಶದ ಚೆಕ್ ಪೋಸ್ಟ್ ಕಚೇರಿಯಲ್ಲಿ ನೀವು ನೀರಿನ ಬಾಟಲಿಗಳು, ಗ್ಲುಕೋಸ್, ಔಷಧ, (ವಿಶೇಷವಾಗಿ ಸುಟ್ಟ ಗಾಯಗಳ ಔಷಧ), ಇತರೆ ಅಗ್ನಿಶಾಮಕ ಅಗತ್ಯತೆಗಳು, ಆಹಾರ ಮತ್ತು ಇತರೆ ಸರಬರಾಜುಗಳನ್ನು ನೀಡಬಹುದಾಗಿದೆ.
ದಯವಿಟ್ಟು ಈ ಸುದ್ದಿ ಹರಡಿ ನಮ್ಮ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಹಾಯ ಮಾಡೋಣ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ
ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೊಲ, ಕೋತಿ, ಜಿಂಕೆ, ಹಾವು ಸೇರಿದಂತೆ ಇತರೆ ಪ್ರಾಣಿಗಳು ಸಜೀವ ದಹನವಾಗಿವೆ. ಬೆಳಗ್ಗಿನ ಜಾವ ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದು, ಮಧ್ಯಾಹ್ನದ ವೇಳೆ ಭೀಕರತೆಗೆ ತಿರುಗುತ್ತದೆ.
ಬೆಳಗ್ಗಿನ ಜಾವ ಮಂಜು ಬೀಳುತ್ತಿರುವ ಕಾರಣ ಬೆಂಕಿ ಹತೋಟಿಗೆ ಬರುತ್ತದೆ. ಸದ್ಯ ಬೆಂಕಿ ಹತೋಟಿಗೆ ಬಂದು ನಿಯಂತ್ರಣ ಕಾಣುತ್ತಿರುವ ಬಂಡಿಪುರದಲ್ಲಿ ಬಿಸಿಲು ಮತ್ತು ಗಾಳಿ ಹೆಚ್ಚಾದ್ರೆ ಮತ್ತೆ ಬೆಂಕಿ ಹರಡುವ ಸಾಧ್ಯತೆಗಳಿವೆ. ನಿನ್ನೆಯೂ ಕೂಡ ಬೆಳಗಿನ ಜಾವ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿತ್ತು. ಆದ್ರೆ ಮಧ್ಯಾಹ್ನ ವೇಳೆ ಮತ್ತೆ ರೌದ್ರವಾತಾರ ತಾಳಿತ್ತು. ಇದು ಹೀಗೆ ಮುಂದುವರಿದ್ರೆ ಕೇರಳ ಗಡಿ ವ್ಯಾಪಿಸುವ ಸಾಧ್ಯತೆಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv