ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇದೆ ಅಂತ ಹುಸಿ ಕರೆ ಮಾಡಿದ ಪ್ರಯಾಣಿಕನೋರ್ವ ಪೊಲೀಸರ ಅತಿಥಿಯಾಗಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಗುಜರಾತ ರಾಜ್ಯದ ಸೂರತ್ ಮೂಲದ ತಾಕೋರೆ ಪ್ರತೀಕ್ ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿ. ಗುಜರಾತ್ ಮೂಲದ ತಾಕೋರೆ ಪ್ರತೀಕ್ ತನ್ನ ಪತ್ನಿ ಹಾಗೂ ಮಗನ ಜೊತೆ ಸಂಬಂಧಿಕರ ಮದುವೆಗೆ ಅಂತ ಬೆಂಗಳೂರಿಗೆ ಆಗಮಿಸಿದ್ದನು.
ಸೋಮವಾರ ಮದುವೆ ಮುಗಿಸಿ ಮುಂಬೈಗೆ ವಾಪಸ್ಸಾಗೋಕೆ ಮೂವರಿಗೆ ಸಂಜೆ 7.10ರ ಬೆಂಗಳೂರು-ಮುಂಬೈ ಏರ್ ಇಂಡಿಯಾ 601 ವಿಮಾನದಲ್ಲಿ ಟಿಕೆಟ್ ಸಹ ಬುಕ್ ಮಾಡಿದ್ದರು. ಆದರೆ ನಿಗದಿತ ಸಮಯಕ್ಕೆ ಏರ್ಪೋರ್ಟ್ ರೀಚ್ ಆಗೋಕೆ ತಡವಾಗಿದೆ. ಹೀಗಾಗಿ ಫ್ಲೈಟ್ ಮಿಸ್ ಆಗಲಿದೆ ಅಂತ ಕೆಐಎಎಲ್ ಅಧಿಕಾರಿಗಳ ನಂಬರಿಗೆ ಕರೆ ಮಾಡಿ ತಾಕೋರೆ ಪ್ರತೀಕ್ ಏರ್ ಇಂಡಿಯಾ 601 ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಕೆಐಎಎಲ್ ಹಾಗೂ ಸಿಐಎಸ್ಎಫ್ ಅಧಿಕಾರಿಗಳು ವಿಮಾನ ತಪಾಸಣೆ ನಡೆಸಿದ್ದಾರೆ.
ಮತ್ತೊಂದೆಡೆ ಅಧಿಕಾರಿಗಳು ಕರೆ ಬಂದ ನಂಬರ್ ಟ್ರೇಸ್ ಮಾಡಿದ್ದಾರೆ. ಆಗ ನಂಬರ್ ಟವರ್ ಲೋಕೇಷನ್ ಏರ್ಪೋರ್ಟ್ ವ್ಯಾಪ್ತಿಯಲ್ಲಿ ಸಿಕ್ಕ ಕಾರಣ ಹುಸಿ ಬಾಂಬ್ ಕರೆ ಮಾಡಿದಾತನನ್ನ ಕೆಐಎಎಲ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸದ್ಯಕ್ಕೆ ತಾಕೋರೆ ಪ್ರತೀಕ್ ವಿರುದ್ಧ ಕೆಎಐಎಲ್ ಆಡಳಿತ ಮಂಡಳಿ ಕೆಐಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾಕೋರೆ ಪ್ರತೀಕ್ ಹಾಗೂ ಪತ್ನಿ ಸೇರಿದಂತೆ ಮಗನನ್ನ ಸಹ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv