ಚಿಕ್ಕೋಡಿ: ನಿಮ್ಮ ಅಂಗಡಿಗಳಲ್ಲಿ ನೀವು ಫೋನ್ ಪೇ, ಗೂಗಲ್ ಪೇ ಯೂಸ್ ಮಾಡ್ತಿದ್ದಿರಾ? ಹಾಗಾದ್ರೆ ಈ ಸ್ಟೋರಿನಾ ನೀವು ಮಿಸ್ ಮಾಡದೇ ನೋಡಬೇಕು. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡೋರು ಹೇಗೆಲ್ಲ ಮೋಸ ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಸಿಕ್ಕಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಅಭರಣ ಖರೀದಿಸಿ ಬಂಗಾರದ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕಿದ ಗ್ಯಾಂಗ್ ಒಂದು ಈಗ ಪೊಲೀಸರ ಬಲೆಗೆ ಬಿದ್ದಿದೆ.
ಡಿಜಿಟಲ್ ಇಂಡಿಯಾ ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆ. ನಗದು ವ್ಯವಹಾರವನ್ನು ಕಡಿಮೆ ಮಾಡಬೇಕು. ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಈ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ. ಆದರೆ ಇದನ್ನೆ ದಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ
ಬೆಳಗಾವಿ ಜಿಲ್ಲೆಯ ಗೋಕಾಕ್, ಹುಕ್ಕೇರಿ ಮತ್ತು ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಂದೇ ರೀತಿಯ ಪ್ರಕರಣಗಳು ವರದಿಯಾಗಿದ್ದವು. ಇದನ್ನು ಬೆನ್ನಟ್ಟಿದ ಪೊಲೀಸರು ಈಗ ಗ್ಯಾಂಗ್ನ ಪತ್ತೆ ಮಾಡಿದ್ದಾರೆ. ಬಂಗಾರದ ಅಂಗಡಿಗಳನ್ನು ಟಾರ್ಗೆಟ್ ಮಾಡ್ತಿದ್ದ ಖದೀಮರ ತಂಡ ಮೊದಲು ಒಂದು ತೊಲ ಬಂಗಾರ(10 ಗ್ರಾಂ) ಖರೀದಿ ಮಾಡಿ ಅದರ ಸಂಪೂರ್ಣ ಅಮೌಂಟ್ ಫೋನ್ ಪೇ ಮೂಲಕ ಸಂದಾಯ ಮಾಡಿ ಅವರ ವಿಶ್ವಾಸ ಗಳಿಸಿ ನಂತರ ಅದೇ ಅಂಗಡಿಗಳಲ್ಲಿ ಹೆಚ್ಚು ಬಂಗಾರ ಖರೀದಿ ಮಾಡುತ್ತಾರೆ.
ಹಣ ಸಂದಾಯ ಮಾಡದೇ ಅಷ್ಟೇ ಅಮೌಂಟ್ ಸ್ಕ್ರೀನ್ ಶಾಟ್ನ್ನು ಮಾಲೀಕರಿಗೆ ತೋರಿಸಿ ಮಕ್ಮಲ್ ಟೋಪಿ ಹಾಕಿ ಅಲ್ಲಿಂದ ಪರಾರಿಯಾಗುತ್ತಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಠಾಣೆ, ರಾಯಭಾಗ ಠಾಣೆ ಮತ್ತು ಹುಕ್ಕೇರಿ ಠಾಣೆಗಳಲ್ಲಿ ಈಗ ಬಂಧಿತರಾಗಿರುವ ಆರೋಪಿಗಳ ಮೇಲೆ 8 ಪ್ರಕರಣ ದಾಖಲಾಗಿದ್ದವು.
ಕಾರ್ಯಾಚರಣೆ ನಡೆಸಿರುವ ಪೊಲೀಸರು ಮಹಾರಾಷ್ಟ್ರ ಮೂಲದ ಹಾಗೂ ಕರ್ನಾಟಕದ ಕಾಗವಾಡ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 22 ಲಕ್ಷ ರೂಪಾಯಿ ಮೌಲ್ಯದ 421 ಗ್ರಾಂ. ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಜಾದಿ ಕಾ ಅಮೃತ ಮಹೋತ್ಸವದ ಹಿಂದೆ ಮೂರು ಮುಖ್ಯ ಕಾರಣವಿದೆ: ಅಮಿತ್ ಶಾ
ಬಂಗಾರ ಖರೀದಿಸಿ ಹಣ ಜಮೆ ಮಾಡಿದ ಸ್ಕ್ರೀನ್ ಶಾಟ್ ತೋರಿಸಿ ಅಂಗಡಿ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕುವ ಜನರ ಬಗ್ಗೆ ಎಚ್ಚರವಾಗಿರಿ. ಹಣ ಜಮೆ ಆಗಿದ್ದನ್ನು ಕನ್ಫರ್ಮ್ ಮಾಡಿಕೊಂಡು ವ್ಯವಹಾರ ಮಾಡಿ ಅಂತ ಎಸ್ಪಿ ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.