ದಾವಣಗೆರೆ: ವಾಟ್ಸಾಪ್ ಹಾಗೂ ಫೇಸ್ ಬುಕ್ ಗಳಲ್ಲಿ ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಧರ್ಮದೇಟು ಬಿದ್ದಿರುವ ಘಟನೆ ದಾವಣಗೆರೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನವ್ಯಜ್ಞಾನ ಜ್ಯೋತಿ ಸಂಸ್ಥೆಯ ಯುವತಿಗೆ ಹಲವು ದಿನಗಳಿಂದ ಯುವಕನೊಬ್ಬ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನು. ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದ ಯುವಕ ಪ್ರತಿನಿತ್ಯ ಫೇಸ್ಬುಕ್, ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸುತ್ತಿದ್ದ ಎಂದು ಗುರುತಿಸಲಾಗಿದೆ. ಯುವಕ ಪಟ್ಟಣದ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಯುವತಿಯರಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಕಲ್ಪಿಸಿ ಸಂದೇಶ ರವಾನಿಸುತ್ತಿದ್ದನು. ಇದರಿಂದ ಮನನೊಂದು ಯುವತಿಯರು ಆ ಯುವಕನನ್ನು ಬುದ್ಧಿವಂತಿಕೆಯಿಂದ ಜಗಳೂರಿಗೆ ಕರೆಸಿ ಸರಿಯಾಗಿ ಕಜ್ಜಾಯ ಕೊಟ್ಟಿದ್ದಾರೆ. ಯುವಕನಿಗೆ ಥಳಿಸುತ್ತಿರುವ ಯುವತಿಯರ ವಿಡಿಯೋ ಇದೀಗ ವೈರಲ್ ಆಗಿದೆ.
ಸದ್ಯ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.