ಮಂಗಳೂರು: ಅನುಚಿತ ವರ್ತನೆ ತೋರಿದ ದೈವ ಪಾತ್ರಿಯೋರ್ವರ ಕೂದಲನ್ನು ಭಕ್ತರು ಬಲವಂತವಾಗಿ ಕತ್ತರಿಸಿ, ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದಿದೆ.
ದೈವ ಪಾತ್ರಿ ಲೋಕೇಶ್ ಪೂಜಾರಿ ಅವರ ಮೇಲೆ ಈ ದೌರ್ಜನ್ಯ ನಡೆದಿದ್ದು, ದೈವದ ನರ್ತನ ಸೇವೆ ನಡೆದ ಬಳಿಕ ಕೆಲವರು ಸೇರಿ ಈ ಹಲ್ಲೆ ನಡೆಸಿದ್ದಾರೆ. ದೈವ ಪಾತ್ರಿ ಲೊಕೇಶ್ ಅವರಿಗೆ ಜನರ ಗುಂಪೊಂದು ಪ್ರಶ್ನಿಸಿದ್ದು, ಕೈಯಲ್ಲಿನ ಖಡಗ ತೆಗೆಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಬಲವಂತವಾಗಿ ಪಾತ್ರಿಯ ತಲೆ ಕೂದಲನ್ನು ಕತ್ತರಿಸಿದ್ದಾರೆ. ಈ ನಡುವೆ ಹಿರಿಯರು ತಡೆಯಲು ಯತ್ನಿಸಿದರೂ ಯುವಕರ ಗುಂಪು ಲೋಕೇಶ್ ಮೇಲೆ ಹಲ್ಲೆ ನಡೆಸಿದೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೈವ ಪಾತ್ರಿಗೆ ಅವಮಾನ ಮಾಡಿರೋ ಬಗ್ಗೆ ವಿರೋಧ ಕೇಳಿಬಂದಿದೆ. ಆದರೆ ಕೃತ್ಯ ಎಸಗಿದವರು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.
ಲೋಕೇಶ್ ಪೂಜಾರಿ ವೃತ್ತಿಯಲ್ಲಿ ದೈವದ ಪಾತ್ರಿಯಾಗಿದ್ದರೂ, ಸಲಿಂಗ ಕಾಮ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕರು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ದೈವದ ಪಾತ್ರಿಗಳು ಇಂಥ ವರ್ತನೆ ತೋರಿದರೆ ಹೇಗೆ ಎನ್ನುವ ಆಕ್ರೋಶದಿಂದ ಯುವಕರು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.