ಉಡುಪಿ: ಲೌಡ್ ಸ್ಪೀಕರ್ ನಿಯಮ ಹಿಂದೂ ಧರ್ಮೀಯರಿಗೂ ಅನ್ವಯಿಸುತ್ತದೆ. ಧ್ವನಿವರ್ಧಕ ಬಳಸುವುದಾದರೆ ತೀವ್ರತೆ ಕಡಿಮೆ ಇರಬೇಕು. ಎಲ್ಲಾ ಹಿಂದೂ ಧಾರ್ಮಿಕ ಕೇಂದ್ರಗಳು ಇದನ್ನು ಅನುಸರಿಸಬೇಕು. ವಿಶೇಷ ದಿನ ವಿಶೇಷ ಸಂದರ್ಭದಲ್ಲಿ ಪರವಾನಿಗೆ ಪಡೆಯೋಣ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸಮಾಜ ನೆಮ್ಮದಿಯಿಂದ ಬಾಳಿ ಬದುಕಲು ನೀತಿ ನಿಯಮಾವಳಿಗಳು ಇವೆ. ಈ ನೀತಿ ನಿಯಮಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಸರ್ಕಾರ, ಸಂವಿಧಾನ, ಸುಪ್ರೀಂ ಕೋರ್ಟ್ ಎಲ್ಲವೂ ಇದೆ. ನಾವೇ ಮಾಡಿದ ವ್ಯವಸ್ಥೆಗಳು ನಾವು ಹೇಗಿರಬೇಕು ಎಂದು ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ನಿಯಮಕ್ಕೆ ಬದ್ಧರಾಗಿ ನಡೆದುಕೊಂಡರೆ ಯಾವುದೇ ಗೊಂದಲ ಇರುವುದಿಲ್ಲ. ನಾವೇ ರಚಿಸಿದ ಸಂವಿಧಾನ, ಸರ್ಕಾರ, ಕೋರ್ಟ್ ಎಲ್ಲವೂ ಇದೆ. ಸಮಾಜದಲ್ಲಿ ಶಾಂತಿ ನೆಮ್ಮದಿ ಉಳಿಯಲು ಪ್ರಜೆಗಳು ನಿಯಮ ಪಾಲಿಸುವುದು ಅತ್ಯಗತ್ಯವಾಗಿದೆ. ಸುಪ್ರೀಂ ಕೋರ್ಟ್ ಧ್ವನಿವರ್ಧಕ ಬಳಕೆಗೆ ಮಾರ್ಗದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಿಯಮ ಪಾಲಿಸಬೇಕು ಎಂದು ಹಿಂದೂ ಸಮಾಜಕ್ಕೆ ಕರೆ ಕೊಟ್ಟರು. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ- ಕೋರ್ಟ್ ಅಂಗಳಕ್ಕೆ ಕೊಂಡೊಯ್ಯಲು ಸಿದ್ಧತೆ
ವಿಶೇಷ ದಿನಗಳು, ವಿಶೇಷ ಆಚರಣೆಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡಬೇಕು. ಸುಪ್ರೀಂ ಕೋರ್ಟ್ ಒಂದು ವರ್ಗ, ಒಂದು ಸಮಾಜಕ್ಕೆ ಆದೇಶ ನೀಡಿಲ್ಲ. ಕೋರ್ಟ್ ಆದೇಶ ಎಲ್ಲರಿಗೂ ಅನ್ವಯ ಆಗುತ್ತದೆ. ಶಬ್ದದ ತೀವ್ರತೆಗೊಂದು ನಿಯಮ ನಿಗದಿಯಾಗಿದೆ. ಇದರಿಂದಾಗಿ ಹಿಂದೂ ಧಾರ್ಮಿಕ ಕೇಂದ್ರಗಳೂ ಸುಪ್ರೀಂಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದರು. ಇದನ್ನೂ ಓದಿ: ಬಿಬಿಎಂಪಿಯ ಡೆಡ್ಲಿ ಕಸದ ಲಾರಿಗಳಿಗೆ ಶೀಘ್ರವೇ ಸ್ಪೀಡ್ ಗವರ್ನರ್ ಅಳವಡಿಕೆ